ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಚೇರಿ ಹಾಗೂ ಮನೆ ಮೇಲೆ ಎರಡು ದಿನಗಳಿಂದ ಐಟಿ ಅಧಿಕಾರಿಗಳು ದಾಳಿ ನಡೆಯುತ್ತಿರುವ ಬೆನ್ನಲ್ಲೇ ಬಿಡದಿ ಈಗಲ್ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಭಯಭೀತರಾಗಿದ್ದು, ಈಗಲೇ ಗುಜರಾತ್ ಗೆ ವಾಪಾಸ್ ಕಳುಹಿಸಿಕೊಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಗುಜರಾತ್ನಿಂದ ಆಗಮಿಸಿದ ಶಾಸಕರನ್ನು ಆ.7ರ ತನಕ ರೆಸಾರ್ಟ್ ನಲ್ಲಿ ಉಳಿಸಿಕೊಂಡು ಆ.8ರಂದು ಗುಜರಾತ್ಗೆ ಕರೆದೊಯ್ದು ರಾಜ್ಯ ಸಭಾ ಚುನಾವಣೆಯಲ್ಲಿ ಭಾಗವಹಿಸುವುದು ಉದ್ದೇಶವಾಗಿತ್ತು. ಇದೀಗ ಈ ಶಾಸಕರಿಗೆ ಬೆಂಗಾವಲಾಗಿದ್ದ ಡಿ.ಕೆ.ಶಿವಕುಮಾರ್ ಅವರು ಐಟಿ ದಾಳಿಗೆ ಸಿಲುಕಿ ಈಚೆಗೆ ಬರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಗುಜರಾತ್ ಶಾಸಕರು ಮತ್ತೆ ಗುಜರಾತ್ಗೆ ಹೋದರೆ ಸಾಕೆಂಬ ಪರಿಸ್ಥಿತಿಗೆ ಬಂದು ನಿಂತಿದ್ದಾರೆ ಎನ್ನಲಾಗಿದೆ.
ಹಾಗೆನೋಡಿದರೆ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ನಿಂದ ಬೆಂಗಳೂರಿಗೆ ಆಗಮಿಸಿದ 44 ಶಾಸಕರು ಬಿಡದಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಇವರ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ಎಸ್.ರವಿ ವಹಿಸಿದ್ದರು. ಇದೀಗ ಇವರೆಲ್ಲರ ನಿವಾಸ ಹಾಗೂ ಕಚೇರಿ ಮೇಲೆ ಐಟಿ ದಾಳಿ ನಡೆದಿರುವುದು ಶಾಸಕರು ಬೆಚ್ಚಿ ಬೀಳುವಂತಾಗಿದೆ. ಅಷ್ಟೇ ಅಲ್ಲದೆ ತಮ್ಮ ಗುಜರಾತ್ನ ನಿವಾಸದ ಮೇಲೆಯೂ ಐಟಿ ದಾಳಿ ನಡೆಯಬಹುದೇನೋ ಎಂಬ ಭಯವೂ ಅವರನ್ನು ಕಾಡತೊಡಗಿದೆ. ಹೀಗಾಗಿ ನಮ್ಮನ್ನು ಬಿಟ್ಟು ಬಿಡಿ ನಮ್ಮ ರಾಜ್ಯಕ್ಕೆ ಹೋಗುತ್ತೇವೆ ಎಂಬ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಹೈಜಾಕ್ ಮಾಡುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅಲ್ಲಿಂದ ಎಲ್ಲಾ ಶಾಸಕರನ್ನು ರಾಜ್ಯಕ್ಕೆ ಬಿಡದಿಯ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡುವಂತೆ ಮಾಡಲಾಗಿತ್ತು. ಹೈಕಮಾಂಡ್ ನ ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಕೊಂಡಿದ್ದರು. ಆದರೆ ಡಿ.ಕೆ.ಶಿವಕುಮಾರ್ ಮುಂದೆ ನಿಂತು ಮಾಡಿದ್ದರು. ಈಗ ಪರಿಸ್ಥಿತಿಯೇ ಬದಲಾಗಿ ಹೋಗಿದ್ದು, ಬಂದ ತಪ್ಪಿಗೆ ಮತ್ತೆ ಗುಜರಾತ್ಗೆ ಹೋದರೆ ಸಾಕೆಂಬ ಸ್ಥಿತಿಗೆ ಬಂದು ನಿಂತಿದ್ದಾರೆ. ಇನ್ನು ದಾಳಿ ನಡೆಸಿದ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಗುಜರಾತ್ ಶಾಸಕರ ಕೊಠಡಿಗೂ ತೆರಳಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಇದು ಇನ್ನಷ್ಟು ಆತಂಕಕ್ಕೆ ಅವರನ್ನು ತಳ್ಳಿದೆ ಎನ್ನಲಾಗಿದೆ.