ಭೋಪಾಲ್: ಓರ್ವ ಭದ್ರತಾ ಸಿಬ್ಬಂದಿಯನ್ನು ಬರ್ಬರವಾಗಿ ಕೊಂದು ಮಧ್ಯಪ್ರದೇಶದ ಭೋಪಾಲ್ ಜೈಲಿನಿಂದ ಪರಾರಿಯಾಗಿದ್ದ 8 ಜನ ಸಿಮಿ ಉಗ್ರರನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ.
ಪರಾರಿಯಾಗಿದ್ದ ಸಿಮಿ ಕಾರ್ಯಕರ್ತರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಪೊಲೀಸರು ಎದುರಾದಾಗ ಸಿಮಿ ಕಾರ್ಯಕರ್ತರು ಗುಂಡಿನ ದಾಳಿ ಆರಂಭಿಸಿದರು. ಇದರಿಂದಾಗಿ ಪೊಲೀಸರು ಪ್ರತಿದಾಳಿ ನಡೆಸಬೇಕಾಯಿತು’ ಎಂದು ಐಜಿ ಯೋಗೇಶ್ವರ್ ಚೌಧರಿ ಹೇಳಿದ್ದಾರೆ.
ನಿಷೇಧಿತ ಸಿಮಿ ಉಗ್ರ ಸಂಘಟನೆಯ ಎಂಟು ಕಾರ್ಯಕರ್ತರು ಸೋಮವಾರ ನಸುಕಿನ 2ರಿಂದ 3 ಗಂಟೆ ವೇಳೆಗೆ ಭದ್ರತಾ ಕಾವಲುಗಾರ ರಮಾಶಂಕರ್ ಯಾದವ್ ಅವರನ್ನು ಹತ್ಯೆ ಮಾಡಿ, ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದರು. ಇವರಲ್ಲಿ ಇಬ್ಬರು ಕಾರ್ಯಕರ್ತರು ಮೂರು ವರ್ಷದ ಹಿಂದೆ ಜೈಲಿನಿಂದ ಪರಾರಿಯಾಗಿ ಮತ್ತೆ ಬಂಧನಕ್ಕೊಳಗಾಗಿದ್ದರು. ಇವರ ವಿರುದ್ಧ ಅನೇಕ ಅಪರಾಧ ಕೃತ್ಯ ನಡೆಸಿರುವ ಆರೋಪವಿದೆ.