ಬೆಂಗಳೂರು : ಕಾಂಗ್ರೆಸ್ನಿಂದ ಮುಂದಿನ ಸಿಎಂ ಯಾರೆಂಬ ವಿಚಾರವಾಗಿ ಕಾಂಗ್ರೆಸ್ನೊಳಗೆ ಆಂತರಿಕವಾಗಿ ನಡೆಯುತ್ತಿದೆ ಎನ್ನಲಾದ ಒಳಜಗಳ ಒಳಗಿಂದೊಳಗೆ ಮುಂದುವರಿಯುತ್ತಿರುವಂತೆ ತೋರುತ್ತಿದೆ. ಸಿದ್ದರಾಮಯ್ಯನವರೇ ಸಿಎಂ ಆಗಬೇಕೆಂದು ಅನೇಕ ಶಾಸಕರು ಈಗಾಗಲೆ ಧ್ವನಿ ಎತ್ತಿದ್ದಾರೆ. ಇದಕ್ಕೆ ಡಿಕೆಶಿ ಮತ್ತವರ ಬೆಂಬಲಿಗರು ಸಾಕಷ್ಟು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷರು ಮತ್ತು ಕೈ ನಾಯಕರ ಸಭೆ ನಡೆದಿದ್ದು, ಇದರಲ್ಲಿ ವಿವಿಧ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಚರ್ಚೆ ನಡೆದಿರುವುದು ತಿಳಿದುಬಂದಿದೆ. ಇದೇ ವೇಳೆ, ಸಿದ್ದರಾಮಯ್ಯ ಸಿಎಂ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವಲಸೆ ಬಂದ ಸಿದ್ದರಾಮಯ್ಯ ಅವರನ್ನ ಸಿಎಂ ಮಾಡಬೇಕೆಂದು ಹೇಳಿ ಮೇಕಪ್ ಮಾಡಿದವರು ನಾವುಗಳೇ ಎಂದು ಅವರು ಹೇಳಿದರು.
ಪಕ್ಷಕ್ಕೆ ಬರುವ ವಲಸಿಗರನ್ನು ಮನೆಗೆ ಬರುವ ಸೊಸೆಗೆ ಹೋಲಿಕೆ ಮಾಡಿದ ಸಿ.ಎಂ. ಇಬ್ರಾಹಿಂ ಅವರು ಸಿದ್ದರಾಮಯ್ಯ ವಿಚಾರಕ್ಕೆ ಇದನ್ನು ತಳುಕು ಹಾಕಿದರು. ಮನೆಗೆ ಬರುವ ಸೊಸೆ ಹೊಸದಾಗಿಯೇ ಬರೋದು. ಸೊಸೆಗೆ ನೀನು ವಲಸೆ ಬಂದವಳು ಅಂತ ಹೇಳೋಕಾಗುತ್ತಾ? ಮನೆಗೆ ಬಂದು ಸ್ವಲ್ಪ ದಿನ ಆದ ಮೇಲೆ ಸೊಸೆಯ ಕೈಗೆ ಮನೆಯ ಕೀಲಿ ಕೈ ಹೋಗುತ್ತದೆ. ಈಗ ಸಿದ್ದರಾಮಯ್ಯ ಕೈಗೂ ಕೀಲಿ ಕೈ ಸಿಕ್ಕಿದೆ. ಅವರನ್ನ ಸೊಸೆಯನ್ನಾಗಿ ಮಾಡಿಕೊಂಡಿದ್ದ ನಿಜ ತಾನೇ. ವಲಸಿಗ, ಹೊಸಬ ಅನ್ನೋ ಜಟಾಪಟಿ ನಡೆಯುವುದಿಲ್ಲ ಎಂದು ಇಬ್ರಾಹಿಂ ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಯಾರು? ಬಳ್ಳಾರಿ ಪಾದಯಾತ್ರೆಯಲ್ಲಿ ಇವರನ್ನು ಮುಂದೆ ತಂದವರು ಯಾರು? ಅವರು ಸಿಎಂ ಆಗಬೇಕೆಂದು ನಾವೇ ಹೇಳಿದ್ದು ಅಲ್ಲವಾ? ಇಂಥವರೊಬ್ಬರು ಇದ್ದಾರೆ ಅಂತ ಹೇಳಿದ್ದೇ ನಾವು. ಸಿದ್ದರಾಮಯ್ಯ ಅವರಿಗೆ ಮೇಕಪ್ ಮಾಡಿದವರೇ ನಾವು ಎಂದು ಮಾಜಿ ಸಚಿವರೂ ಆಗಿರುವ ಸಿಎಂ ಇಬ್ರಾಹಿಂ ಬಣ್ಣಿಸಿದರು.
ಸಿದ್ದರಾಮಯ್ಯ ಹೀರೋ ಇದ್ದರೂ ಹಿನ್ನೆಲೆ ಗಾಯಕರು ಯಾರು? ಸ್ವಲ್ಪ ಕ್ಯಾಸೆಟ್ ತೆಗೆದುನೋಡಿ. ಅದರಲ್ಲಿ ನಿಮಗೆ ಹಿನ್ನೆಲೆ ಗಾಯಕ ಯಾವತ್ತೂ ಕಾಣಲ್ಲ. ಒಂದು ರೂಗೆ ಒಂದು ಕಿಲೋ ಅಕ್ಕಿ, ಮಧ್ಯಾಹ್ನದ ಊಟ ತಂದವರು ಯಾರು? ತಮಿಳುನಾಡಿನಲ್ಲಿ ಎರಡು ದಿನ ಕುಳಿದು ಅಧ್ಯಯನ ಮಾಡಿ ನಾನು ಆ ಯೋಜನೆ ತಂದೆ. ಅದು ಯಶಸ್ವಿ ಆಯ್ತು. ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಯೋಜನೆ ಕೊಟ್ಟೆ ಎಂದು ಇಬ್ರಾಹಿಂ ಹೇಳಿದರು. ಮುಂದಿನ ಸಿಎಂ ಎಂಬ ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಇಬ್ರಾಹಿಂ, ಮೊದಲು ಎಂಎಲ್ಎ ಎಲೆಕ್ಷನ್ ಆಗಿ ಕಾಂಗ್ರೆಸ್ ಪಕ್ಷ ಗೆಲ್ಲಲಿ. ನಂತರ ಶಾಸಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡಬಹುದು. ರಾಷ್ಟ್ರೀಯ ಪಕ್ಷದಲ್ಲಿ ಒಂದು ಪದ್ಧತಿ ಇರುತ್ತದೆ. ಶೇ. 90ರಷ್ಟು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಹೈಕಮಾಂಡ್ ಈ ವಿಚಾರದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ ಎಂದು ಪ್ರತಿಕ್ರಿಯಿಸಿದರು. ಇನ್ನು, ಯಡಿಯೂರಪ್ಪ ಮತ್ತು ಬಿಜೆಪಿ ಬಗ್ಗೆ ಇಬ್ರಾಹಿಂ ತಮ್ಮದೇ ರೀತಿಯಲ್ಲಿ ಕುಟುಕಿದರು. ಸಿದ್ದರಾಮಯ್ಯಗೆ ಒಂದು ತಂಡ ಸಿಕ್ಕಿತು. ಆದರೆ ಯಡಿಯೂರಪ್ಪಗೆ ಅಂಥ ಟೀಮ್ ಸಿಗಲಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರೇ ಟೀಮ್. ಯಡಿಯೂರಪ್ಪಗೆ ಜಾತಿ ಬೆಂಬಲ ಇದೆ. ಯಡಿಯೂರಪ್ಪ ಬಿಟ್ಟು ಹೋದರೆ ಬಿಜೆಪಿಗೆ ಬರೋದು ಕೇವಲ 40 ಸೀಟು ಮಾತ್ರ ಎಂದು ಸಿ.ಎಂ. ಇಬ್ರಾಹಿಂ ವ್ಯಂಗ್ಯ ಮಾಡಿದರು
ವಲಸೆ ಬಂದ ಸಿದ್ದರಾಮಯ್ಯನವರನ್ನು ಮುಖ್ಯ ಮಂತ್ರಿ ಮಾಡಿದ್ದು ನಾವೇ ; ಸಿ ಎಂ ಇಬ್ರಾಹಿಂ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.