ಬೆಂಗಳೂರು : ನಮ್ಮ ಬಸ್ಸು ಖಾಲಿ ಇಲ್ಲ, ಖಾಲಿ ಇರುವ ಬಸ್ಸುಗಳಲ್ಲಿ ಸಂಪರ್ಕ ಬೆಳೆಸಲು ಹೋಗುತ್ತಾರೆ, ಎರಡೂ ರಾಷ್ಟ್ರೀಯ ಪಕ್ಷಗಳು 2023ರ ಚುನಾವಣೆಗೆ ಮೊದಲು ನಮ್ಮ ಬಸ್ಸು ಹತ್ತಿರಿ ಎಂದು ಕರೆಯುತ್ತಿರುತ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಸವಾಲುಗಳನ್ನು ಸ್ವೀಕರಿಸುತ್ತೇವೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಹಾಸನದಲ್ಲಿ ನನ್ನ ಮಗನಿಗೆ ಜನ ಆಶೀರ್ವಾದ ಮಾಡಿದ್ದಾರೆ. ದೇವೇಗೌಡರಿಗೆ ಚಾಕು ಹಾಕಿದವರೆಲ್ಲ ಏನೇನೋ ಆಗಿದ್ದಾರೆ. ರಾಷ್ಟ್ರೀಯ ಪಕ್ಷಗಳು ತಿರುಕನ ಕನಸು ಕಾಣುತ್ತಿವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ಗೆ ಟಾಂಗ್ ಕೊಟ್ಟಿದ್ದಾರೆ.
ಬೆಳಗ್ಗೆಯೆದ್ದರೆ ಕಾಂಗ್ರೆಸ್ ನವರು ದೇವೇಗೌಡ, ಕುಮಾರಸ್ವಾಮಿಯ ಭಜನೆ ಮಾಡುತ್ತಾರೆ. ಸಿಎಂ ಇಬ್ರಾಹಿಂ ಜೆಡಿಎಸ್ ಗೆ ಬರುವ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ತೀರ್ಮಾನಿಸುತ್ತಾರೆ, ನನ್ನದೇನೂ ಇಲ್ಲ ಎಂದರು.
ಜೆಡಿಎಸ್ ನ್ನು ಮುಗಿಸುವ ಬಗ್ಗೆ ಯೋಚನೆ ಕಾಂಗ್ರೆಸ್ ಮತ್ತು ಬಿಜೆಪಿಯದ್ದು ತಿರುಕನ ಕನಸು, ದೇವೇಗೌಡರು ಬದುಕಿರುವವರೆಗೂ ಅದು ಸಾಧ್ಯವಿಲ್ಲ ಎಂದು ಹೇಳಿದರು.