ಬೆಂಗಳೂರು : ವರ್ಷದ ಆರಂಭದಿಂದಲೇ ಕೊರೊನಾ ಸೋಂಕು ಹೆಚ್ಚುತ್ತಲೇ ಹೋಗುತ್ತಿರುವುದು ಆತಂಕಕಾರಿಯಾಗಿದ್ದು, ಬುಧವಾರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 4,246ಕ್ಕೇರಿರುವುದು ಆತಂಕಕ್ಕೀಡು ಮಾಡಿದೆ.
ರಾಜ್ಯದಲ್ಲೀಗ ಪಾಸಿಟಿವಿಟಿ ದರ ಶೇ.3.33ರಷ್ಟಾಗಿದೆ. ಕಳೆದ 24 ಗಂಟೆಗಳಲ್ಲಿ 1,27,328 ಮಂದಿಗೆ ಕೊರೊನಾವೈರಸ್ ಸೋಂಕಿನ ಪರೀಕ್ಷೆ ನಡೆಸಲಾಗಿತ್ತು. ಒಂದೇ ದಿನದಲ್ಲಿ 4,246 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅಂಕಿ-ಅಂಶಗಳ ಕುರಿತು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 30,17,572 ಕ್ಕೆ ಏರಿದ್ದು, ಬುಧವಾರ ಗುಣಮುಖರಾಗಿ 362 ಮಂದಿ ಡಿಸ್ಚಾರ್ಜ್ ಆಗಿದ್ದು ಒಟ್ಟಾರೆ ಇದುವರೆಗೆ 29,61,772 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 17,414 ಆಗಿದ್ದು, ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ.
ಜಿಲ್ಲಾವಾರು ನೋಡುವುದಾದರೆ ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಉಳಿದಂತೆ ಬಾಗಲಕೋಟೆ 06,ಬಳ್ಳಾರಿ 34, ಬೆಳಗಾವಿ 31, ಬೆಂಗಳೂರು ಗ್ರಾಮಾಂತರ 19, ಬೆಂಗಳೂರು ನಗರ 3,605, ಬೀದರ್ 03, ಚಾಮರಾಜನಗರ 02, ಚಿಕ್ಕಬಳ್ಳಾಪುರ 08, ಚಿಕ್ಕಮಗಳೂರು 12, ಚಿತ್ರದುರ್ಗ 06, ದಕ್ಷಿಣಕನ್ನಡ 111, ದಾವಣಗೆರೆ 03, ಧಾರವಾಡ 26, ಗದಗ 05, ಹಾಸನ 20, ಕಲಬುರಗಿ 28, ಕೊಡಗು 20, ಕೋಲಾರ 24, ಮಂಡ್ಯ 36, ಮೈಸೂರು 59, ರಾಮನಗರ 04, ಶಿವಮೊಗ್ಗ 22, ತುಮಕೂರು 43, ಉಡುಪಿ 88, ಉತ್ತರಕನ್ನಡ 17, ವಿಜಯಪುರ 14 ಪ್ರಕರಣಗಳು ಪತ್ತೆಯಾಗಿವೆ.