ಬೆಂಗಳೂರು : ಈಗಾಗಲೇ ರಾಜ್ಯದ ಜನತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಗ್ಯಾಸ್, ತರಕಾರಿ, ಪೆಟ್ರೋಲ್, ಡೀಸೆಲ್ ಬೆಲೆಯಿಂದ ಜರ್ಜರಿತರಾಗಿದ್ದಾರೆ. ಹೀಗಿರುವಾಗಲೇ ರಾಜ್ಯದಲ್ಲಿನ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಬೆಲೆ ಏರಿಕೆಗೆ ಮುಂದಾಗಿವೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವಂತ ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್ ನೀಡೋದಕ್ಕೆ ಮುಂದಾಗಿವೆ.
ಈ ಸಂಬಂಧ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದಂತ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಇತರೆ ಕಂಪನಿಗಳು ವಿದ್ಯುತ್ ಉತ್ಪಾದನೆಯ ವೆಚ್ಚದ ಏರಿಕೆಯಿಂದಾಗಿ ನಷ್ಟವನ್ನು ಅನುಭವಿಸುತ್ತಿವೆ. ಇದನ್ನು ಸರಿದೂಗಿಸೋ ಕಾರಣದಿಂದಾಗಿ ಪ್ರತಿ ಯುನಿಟ್ ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿವೆ. ಕಂಪನಿಗಳು ಸಲ್ಲಿಸಿರುವಂತ ಪ್ರಸ್ತಾವನೆಯಲ್ಲಿ ಪ್ರತಿ ಯುನಿಟ್ ವಿದ್ಯುತ್ ಗೆ ರೂ.1.50 ಹೆಚ್ಚಿಸುವಂತೆ ಮನವಿ ಮಾಡಿವೆ.
ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆಗೆ ಕೆಇಆರ್ ಸಿ ಒಪ್ಪಿಗೆ ಸೂಚಿಸಿದ್ದೇ ಆದಲ್ಲಿ, ಸದ್ಯದಲ್ಲೇ ರಾಜ್ಯದಲ್ಲಿ ಪ್ರತಿ ಯುನಿಟ್ ವಿದ್ಯುತ್ ದರದಲ್ಲಿ ಹೆಚ್ಚಳವಾಗಲಿದೆ. ಈ ಮೂಲಕ ಜನತೆಗೆ ವಿದ್ಯುತ್ ದರ ಏರಿಕೆಯ ಬರೆ ಕೂಡ ಬೀಳಲಿದೆ. ಆ ಬಗ್ಗೆ ಕೆಇಆರ್ ಸಿ ಹಾಗೂ ರಾಜ್ಯ ಸರ್ಕಾರ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.