ಬೆಂಗಳೂರು,ಡಿ.28 : ರಾಜ್ಯದಲ್ಲಿ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡಲು ರಾಜ್ಯ ಸರ್ಕಾರ ಈ ಬಾರಿ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸಲು ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಶಾಲಾಕಾಲೇಜಿನ ವಿದ್ಯಾರ್ಥಿನಿಯರಿಗೆ ಆಯಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮನೆಗಳಲ್ಲೇ ಕೋವಿಡ್ ಲಸಿಕೆಯನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಒಂದು ವೇಳೆ ಇದು ಜಾರಿಯಾದರೆ ಇಡೀ ದೇಶದಲ್ಲೇ ಕರ್ನಾಟಕ ಶಾಲಾಕಾಲೇಜುಗಳಲ್ಲಿ ಹಾಗೂ ಮನೆಗಳಲ್ಲಿ ಅರ್ಹರಿಗೆ ಲಸಿಕೆಯನ್ನು ನೀಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 15ರಿಂದ 18 ವರ್ಷದ ಶಾಲಾ ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕುವ ಬದಲು ಕಾಲೇಜುಗಳಲ್ಲೇ ಲಸಿಕಾ ಕೇಂದ್ರಗಳನ್ನು ತೆರೆದು ಅಲ್ಲಿಯೇ ಹಾಕುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಬಂದು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಲಿದ್ದಾರೆ. ಪಾಠ ಪ್ರವಚನ, ಸಮಯದ ಅವಕಾಶ ಇತ್ಯಾದಿ ಕಾರಣಗಳಿಂದ ಲಸಿಕೆ ಪಡೆಯಲು ಬರುವುದಿಲ್ಲ. ಹೀಗಾಗಿ ಶಾಲಾ ಕಾಲೇಜುಗಳಲ್ಲೇ ಲಸಿಕೆ ನೀಡಲು ಅನುಕೂಲವಾಗುವಂತೆ ಕೇಂದ್ರಗಳನ್ನು ತೆರೆಯಲು ಕಾರ್ಯೋನ್ಮುಖರಾಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಿಎಂ ನಿರ್ದೇಶನ ನೀಡಿದ್ದಾರೆ.
ಕಾಲೇಜಿನ ಗುರುತಿನ ಚೀಟಿ ಸೇರಿದಂತೆ ಯಾವುದಾದರೊಂದು ಅರ್ಹ ದಾಖಲೆಗಳನ್ನು ಪಡೆದು ಶಾಲಾಕಾಲೇಜುಗಳಲ್ಲೇ ಲಸಿಕೆಯನ್ನು ನೀಡಬೇಕು. ಇದಕ್ಕಾಗಿ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಬೇಕು. ಖಾಸಗಿ ಮತ್ತು ಸರ್ಕಾರಿ ಶಾಲಾಕಾಲೇಜುಗಳಲ್ಲಿ ಈ ಲಸಿಕೆಯನ್ನು ಶೇ.100ರಷ್ಟು ಗುರಿ ಸಾಧಿಸಬೇಕೆಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮಕ್ಕಳಿಕೆ ಲಸಿಕೆ ನೀಡುವುದರ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಕ್ಕಳು ಲಸಿಕೆ ಪಡೆದುಕೊಳ್ಳುವುದೇ ಇರುವುದನ್ನು ತಪ್ಪಿಸಲು 15-18 ವರ್ಷದ ಮಕ್ಕಳಿಗೆ ಶಾಲೆ ಹಾಗೂ ಕಾಲೇಜುಗಳಲ್ಲಿಯೇ ಲಸಿಕೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಈ ಕುರಿತು ಶಿಕ್ಷಣ ಇಲಾಖೆ, ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಹದಿಹರೆಯದವರಿಗೆ ಲಸಿಕೆ ಹಾಕುವ ಕುರಿತ ಮುಖ್ಯಮಂತ್ರಿಗಳ ಹೇಳಿಕೆಯನ್ನು ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವ ಮಕ್ಕಳ ಸಂಘವು ಬೆಂಬಲಿಸಿದೆ. ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಹೋಗುವ 15-18 ವರ್ಷದ ಮಕ್ಕಳ ಬಗ್ಗೆ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತವೆ, ಹೀಗಾಗಿ ಅವರಿಗೆ ಲಸಿಕೆ ಹಾಕುವುದು ಸವಾಲಾಗುವುದಿಲ್ಲ. ಶಾಲೆಗಳಲ್ಲಿ ಲಸಿಕಾ ಕೇಂದ್ರಗಳ ತೆರೆಯಲು ಶಾಲಗಳು ಉತ್ಸುಕವಾಗಿವೆ. ಹೀಗಾಗಿ ಮಕ್ಕಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವುದು, ಸುವ್ಯವಸ್ಥಿತ ರೀತಿಯಲ್ಲಿ ಲಸಿಕೆ ಹಾಕುವ ಕಾರ್ಯ ಮಾಡಬಹುದುದಾಗಿದೆ.
ಮನೆ ಬಾಗಿಲಿಗೆ ಡೋಸ್: 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಕುರಿತಾಗಿ ಉದ್ದೇಶಿತ ಜನಸಂಖ್ಯೆಯ ಜನರನ್ನು ಆರಂಭದಲ್ಲಿ ಲಸಿಕೆ ಕೇಂದ್ರಗಳಿಗೆ ಕರೆಯಲಾಗುತ್ತದೆ. ಈ ವಯೋಮಾನದ ಜನರು ಮತ್ತು ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರ ಮಾಹಿತಿಗಳಿವೆ.
ಲಸಿಕೆ ಕೇಂದ್ರಗಳ ಹೊರತಾಗಿ ಫಲಾನುಭವಿಗಳ ವಯಸ್ಸು ಮತ್ತು ರೋಗಗಳ ಆಧಾರದ ಮೇಲೆ ಬೂಸ್ಟರ್ ಡೋಸ್ಗಳನ್ನು ಅವರ ಮನೆ ಬಾಗಿಲಿಗೇ ತೆರಳಿ ನೀಡಲಾಗುತ್ತದೆ. ಬೆಂಗಳೂರು ನಗರವು ಶೇಕಡಾ 100ರಷ್ಟು ಲಸಿಕೆ ಗುರಿ ಸಾಧಿಸಿದೆ, ಆದರೆ ಇಡೀ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಿತಿಯಲ್ಲಿ ಕೆಲವು ಹಳ್ಳಿಗಳೂ ಇಲ್ಲಿ ಸೇರ್ಪಡೆಗೊಂಡಿದೆ.
ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯವನ್ನು ಚುರುಕಿನಿಂದ ನಡೆಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಜನರು ಮುಂದೆ ಬಂದು ಲಸಿಕೆಯನ್ನು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಉದ್ದೇಶಿತ ಗುರಿಯನ್ನು ತಲುಪಲು ಹೆಚ್ಚು ಶ್ರಮ ವಹಿಸಬೇಕೆಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
15ರಿಂದ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಜನವರಿ 3ರಿಂದ ಲಸಿಕೆ ನೀಡಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಕರ್ನಾಟಕದಲ್ಲಿ ಜನವರಿ 1ರಿಂದಲೇ ಹೆಸರು ನೋಂದಾಯಿಸಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ.