ಬೆಂಗಳೂರು : ಕೆ.ಜಿ. ಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೈಕೊಂದು ಗುದ್ದಿ ವೃದ್ಧ ಹುಸೇನ್ ಖಾನ್ (81) ಎಂಬುವರು ಮೃತಪಟ್ಟಿದ್ದಾರೆ.
‘ಸಗಾಯಪುರ ಮುಖ್ಯರಸ್ತೆಯ ಹಳೇ ಬಾಗಲೂರು ಲೇಔಟ್ ನಿವಾಸಿ ಹುಸೇನ್ ಖಾನ್, ಬಡಗಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಊಟಕ್ಕೆಂದು ತಮ್ಮ ಮನೆಯಿಂದ ಮಗನ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಅಪಘಾತದಿಂದ ಹುಸೇನ್ ಖಾನ್ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗುತ್ತಿತ್ತು. ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ತಡರಾತ್ರಿ ಅವರು ಅಸುನೀಗಿದ್ದಾರೆ’ ಎಂದೂ ತಿಳಿಸಿವೆ.
‘ಅಪಘಾತದ ನಂತರ ಬೈಕ್ ಬಿಟ್ಟು, ಸವಾರ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.