ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬಿಜೆಪಿ ಕರ್ನಾಟಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ವಾರ್ ಮುಂದುವರಿದಿದೆ. ಬಿಜೆಪಿಯು ಸಿದ್ದರಾಮಯ್ಯ ಆತ್ಮವಂಚನೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಆರೋಪಿಸಿದೆ.
ನಿನ್ನೆ ಸಿದ್ದರಾಮಯ್ಯ ಅವರು ಜೈಕಿಸಾನ್ ಹ್ಯಾಶ್ ಟ್ಯಾಗ್ ಮೂಲಕ, ಕರಾಳ ಕೃಷಿ ಕಾಯ್ದೆಗಳನ್ನು ನರೇಂದ್ರ ಮೋದಿ ಸರಕಾರ ವಾಪಸು ಪಡೆದಂತೆ ರಾಜ್ಯ ಬಿಜೆಪಿ ಸರಕಾರ ಕೂಡ ರೈತ ವಿರೋಧಿಯಾಗಿರುವ ಎಪಿಎಂಸಿ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆಯನ್ನು ತಕ್ಷಣ ವಾಪಸು ಪಡೆಯಬೇಕು ಎಂದು ಸರಣಿ ಟ್ವೀಟ್ ಮಾಡಿ ಆಗ್ರಹಿಸಿದ್ದರು.
ಅದಕ್ಕೆ ಇಂದು ಉತ್ತರಿಸಿರುವ ಕರ್ನಾಟಕ ಬಿಜೆಪಿ, ಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಮಾಡಿದೆ. ‘ಮಾನ್ಯ ಸಿದ್ದರಾಮಯ್ಯನವರೇ, ನಾನು ದೇವರಾಜ ಅರಸು ಮಾರ್ಗದಲ್ಲಿ ನಡೆಯುವವನು ಎಂಬ ಆತ್ಮವಂಚನೆಯ ಮಾತುಗಳನ್ನು ಇನ್ನಾದರೂ ನಿಲ್ಲಿಸಿ. ಕೃಷಿ ಭೂಮಿ ಖರೀದಿಗಿದ್ದ ಆದಾಯ ಮಿತಿಯನ್ನು ಮೊದಲು ಸಡಿಲಿಸಿದ ಮಹಾನುಭಾವ ಯಾರು? ಭೂಗಳ್ಳರಿಗೆ ಅನುಕೂಲವಾಗಲಿ ಎಂದು ಆದಾಯ ಮಿತಿ ಸಡಿಲಿಸಿದ್ದೇ?’ ಎಂದು ಪ್ರಶ್ನಿಸಿದೆ.
ದೇವರಾಜ್ ಅರಸು ಜನ್ಮ ಶತಮಾನೋತ್ಸವ ವರ್ಷದಲ್ಲಿ ಕೃಷಿ ಭೂಮಿ ಖರೀದಿಯ ಆದಾಯದ ಮಿತಿಯನ್ನು ಸಡಿಲಗೊಳಿಸಿತ್ತು. ಆದರೆ, ಕೃಷಿ ಭೂಮಿ ಖರೀದಿಯ ಮಿತಿಯನ್ನು ₹ 2 ಲಕ್ಷದಿಂದ 25 ಲಕ್ಷಕ್ಕೆ ಏರಿಸುವ ನಿರ್ಧಾರ ತೆಗೆದುಕೊಂಡಿದ್ದು ಸಿದ್ದರಾಮಯ್ಯ ಸರಕಾರ. ಆಗ ಸ್ವಪಕ್ಷೀಯರೇ ಇದನ್ನು ವಿರೋಧಿಸಿದ್ದರೂ ಸಿದ್ದರಾಮಯ್ಯ ಟವೆಲ್ ಕೊಡವಿಕೊಂಡು ನಡೆದಿದ್ದರು. ರಾಜ್ಯ ಸರಕಾರ ಭೂ ಸುಧಾರಣಾ ವಿಧೇಯಕವನ್ನು ಸದನದಲ್ಲಿ ಮಂಡಿಸಿದಾಗ, ಸಭಾತ್ಯಾಗ ಮಾಡಿ ನಿಮ್ಮ ಸದಸ್ಯರ ಜೊತೆ ಎದ್ದು ಹೋಗಿದ್ದೇಕೆ? ಅಂದು ಮೌನಕ್ಕೆ ಜಾರಿದ ನೀವು ಇಂದು ವಿರೋಧಿಸುತ್ತಿರುವುದು ರಾಜಕೀಯ ಕಾರಣಕ್ಕಾಗಿಯಲ್ಲವೇ?
ಮೈತ್ರಿ ಸರಕಾರದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಗಾಳಿಗೆ ತೂರಲಾಗಿತ್ತು. ಕೈಗಾರಿಕಾ ಉದ್ದೇಶಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟು, ಉದ್ಯಮಿಗಳು ನೇರವಾಗಿ ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು. ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಿದ್ದು, ಸಿದ್ದರಾಮಯ್ಯ ಮಾರ್ಗದರ್ಶನದಲ್ಲೇ ಕಾಯ್ದೆ ಮುರಿದಿದ್ದು ನಿಜವಲ್ಲವೇ? ಎಂದು ಬಿಜೆಪಿ ಪ್ರಶ್ನೆಗಳ ಸುರಿಮಳೆಗರೆದಿದೆ.