ಬೆಂಗಳೂರು : ಅತ್ಯಂತ ಕಡುಬಡವ, ಸಾಮಾನ್ಯ ಕನ್ನಡಿಗನಿಗೆ ಆರ್ಥಿಕ ಸಬಲತೆ ಕೊಡಬೇಕಾಗಿರುವುದು ಇಂದಿನ ಅಗತ್ಯ. ಅದಕ್ಕಾಗಿ ರಾಜ್ಯಕ್ಕೆ ಬರುವ ಉದ್ಯಮಗಳಲ್ಲಿ ಕನ್ನಡಿಗರಿಗೆ ಅತೀ ಹೆಚ್ಚು ಉದ್ಯೋಗಗಳನ್ನು ನೀಡಬೇಕೆಂಬ ಕಾನೂನನ್ನು ಕಡ್ಡಾಯವಾಗಿ ಪಾಲಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಶನಿವಾರ ಅಕ್ಕ (ಅಮೆರಿಕ ಕನ್ನಡ ಕೂಟಗಳ ಆಗರ) ಸಂಸ್ಥೆಯಿಂದ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಸರಕಾರ ಕನ್ನಡದ ಬಗ್ಗೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ಕನ್ನಡವನ್ನು ನಾವು ಬೆಳೆಸಬೇಕೆಂಬ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಉದ್ಯೋಗದಲ್ಲಿ ಕನ್ನಡವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದೇವೆ. ಉದ್ಯಮಗಳಲ್ಲಿ ಕನ್ನಡಿಗರಿಗೆ ಬೇರೆ ಬೇರೆ ಕೆಟಗೆರಿಯಲ್ಲಿ ಹೆಚ್ಚಿನ ಉದ್ಯೋಗ ನೀಡಬೇಕೆಂಬ ಕಾನೂನನ್ನು ಪಾಲಿಸುತ್ತೇವೆ. ಅದಕ್ಕೆ ಪೂರಕವಾಗಿ ಶಿಕ್ಷಣ, ಕೌಶಲ ತರಬೇತಿ, ಉನ್ನತ ಶಿಕ್ಷಣ ಕನ್ನಡದಲ್ಲಿ ಮಾಡುತ್ತೇವೆ. ಇದಕ್ಕಿರುವ ಸವಾಲುಗಳನ್ನು ಎದುರಿಸಲು ಸರಕಾರ ಸಿದ್ಧವಿದೆ ಎಂದರು.
ಕನ್ನಡಿಗರು ವಿದೇಶಕ್ಕೆ ಹೋಗಿ, ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಯಶಸ್ವಿಯಾಗಬಹುದು ಎಂದಾದರೆ, ಕನ್ನಡಿಗರು ಇಲ್ಲಿ ಯಶಸ್ವಿಯಾಗುವುದು ಆವಶ್ಯಕತೆ ಇದೆ ಎಂದ ಮುಖ್ಯಮಂತ್ರಿಗಳು, ಅಕ್ಕ ಅಮೆರಿಕದಲ್ಲಿರುವ ಕನ್ನಡ ಅಸ್ಮಿತೆಗಳ ಕೂಟ ಮತ್ತು ಕನ್ನಡಿಗರ ಬ್ರ್ಯಾಂಡ್ ನೇಮ್. ಅಲ್ಲಿನ ಎಲ್ಲ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡದ ಭಾವನೆಗಳಿಗೆ ಸ್ಪಂದನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ರಾಜ್ಯೋತ್ಸವ ಕನ್ನಡಿಗರಿಗೆ ಕನ್ನಡ ನಾಡು ಬೇಕೆನ್ನುವ ಕೂಗಿಗೆ ಮನ್ನಣೆ ಸಿಕ್ಕಿದ ದಿನ. ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಿ ರಾಜ್ಯ ಸ್ಥಾಪಿಸಿ, ಕನ್ನಡ ಭಾಷಿಕರನ್ನು ಒಂದೆಡೆ ತಂದಿದ್ದರಿಂದ ಎಲ್ಲರಿಗೂ ತಮ್ಮ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಕನ್ನಡ ಅತ್ಯಂತ ಪುರಾತನವಾಗಿರುವ ಭಾಷೆ. ದಕ್ಷಿಣ ಭಾರತದ ಭಾಷೆಗಳಲ್ಲಿ ಕನ್ನಡ ಅತ್ಯಂತ ಪುರಾತನ ಭಾಷೆ. ತಮಿಳಿಗಿಂತ ಮೊದಲು ಕನ್ನಡ ಇತ್ತು ಎಂಬುದಕ್ಕೆ ಪುರಾವೆಗಳಿವೆ. ಅದಕ್ಕೆ ಶಾಸೀಯ ಸ್ಥಾನಮಾನವೂ ಸಿಕ್ಕಿದೆ. ಕವಿ, ಸಾಹಿತಿ, ಬರಹಗಾರರು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಉಡುಪಿಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ. ಅಶ್ವತ್ಥ್ನಾರಾಯಣ, ಅಕ್ಕ ಸಂಸ್ಥೆಯ ಅಧ್ಯಕ್ಷ ತುಮಕೂರು ದಯಾನಂದ, ಉಪಾಧ್ಯಕ್ಷೆ ಅನುರಾಧಾ ತಾವರೆಕೆರೆ ಮೊದಲಾದವರಿದ್ದರು.