ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸುವರ್ಣ ಮಹೋತ್ಸವದ ಅಂಗವಾಗಿ ಆಗಸ್ಟ್ 2ರಿಂದ 6ರವರೆಗೂ ಮೇಯರ್ ಕಪ್ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ರಾಷ್ಟ್ರಮಟ್ಟದ ಎ ದರ್ಜೆಯ ಪುರುಷರ ಹಾಗೂ ಮಹಿಳೆಯರ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮಮಂದಿರ ಆಟದ ಮೈದಾನದಲ್ಲಿ ನಡೆಯಲಿದ್ದು, ರಾಷ್ಟ್ರಮಟ್ಟದ ಪುರುಷರ ಎಂಟು ಹಾಗೂ ಮಹಿಳೆಯರ 7 ತಂಡಗಳು ಭಾಗವಹಿಸಲಿವೆ ಎಂದರು.
ಯುವಕ ಯುವತಿಯರಿಗೆ ಕ್ರೀಡಾ ಮನೋಭಾವ ಸ್ಪೂರ್ತಿ ತುಂಬುವ ಸಲುವಾಗಿ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಮೇಯರ್ ಕಪ್ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ್ದೇವೆ. ಕರ್ನಾಟಕ ಪೋಸ್ಟಲ್, ಎಚ್ಎಸ್ಐಐಡಿಸಿ ಹರ್ಯಾಣ, ಪಂಜಾಬ್ ಪೊಲೀಸ್, ರೈಲ್ವೇಸ್, ಐಒಬಿ ಚೆನ್ನೈ, ಕೇರಳ, ಇಂಡಿಯನ್ ಇಂಕಮ್ ಟ್ಯಾಕ್ಸ್ ಹಾಗೂ ಸಿಆರ್ಪಿಎಫ್ ದೆಹಲಿ ಪುರುಷರ ತಂಡಗಳು ಭಾಗವಹಿಸಲಿವೆ. ಮಹಿಳೆಯರ ತಂಡದಲ್ಲಿ ಬೆಂಗಳೂರು ಸಿಟಿ, ಚೆನ್ನೈ ಕ್ವೀನ್ಸ್ , ಕೇರಳ, ರೈಲ್ವೇಸ್, ಸಿಆರ್ಪಿಎಫ್ ದೆಹಲಿ, ಹಿಮಾಚಲ ಪ್ರದೇಶ್ ಹಾಗೂ ಬೆಂಗಾಲ್ ಟೈಗರ್ಸ್ ಪಾಲ್ಗೊಳ್ಳಲಿವೆ ಎಂದು ವಿವರಿಸಿದರು.
ಮೊದಲ ಬಹುಮಾನ ಪಡೆದ ಪುರುಷರ ತಂಡಕ್ಕೆ 4ಲಕ್ಷ , 2ನೇ ಸ್ಥಾನ 3ಲಕ್ಷ ಹಾಗೂ 3ನೇ ಸ್ಥಾನಕ್ಕೆ 2 ಲಕ್ಷ , 4ನೇ ಸ್ಥಾನಕ್ಕೆ ಒಂದು ಲಕ್ಷ ನಗದು ಹಾಗೂ ಮಹಿಳೆಯರ ಮೊದಲ ವಿಜೇಯ ತಂಡಕ್ಕೆ 2.50 ಲಕ್ಷ , 2ನೇ ಸ್ಥಾನಕ್ಕೆ 1.50 ಲಕ್ಷ, ಮೂರನೇ ಸ್ಥಾನಕ್ಕೆ ಒಂದು ಲಕ್ಷ ಹಾಗೂ ನಾಲ್ಕನೇ ಸ್ಥಾನಕ್ಕೆ 50 ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು ಎಂದರು.
ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಬಿಬಿಎಂಪಿ ವತಿಯಿಂದ ಒಂದು ಕೋಟಿ ರೂ. ಅನುದಾನ ನೀಡಲಾಗಿದೆ. ರಾಜಾಜಿನಗರದಲ್ಲಿ ವಾಲಿಬಾಲ್ ಆಟವನ್ನು ಹುಟ್ಟುಹಾಕಿದ ಹಿನ್ನೆಲೆಯಲ್ಲಿ ಅಲ್ಲೇ ಪಂದ್ಯಾವಳಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.