ಬೆಂಗಳೂರು: ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾವೇರಿ ನದಿ ವಿವಾದದ ಕುರಿತು ಸರ್ವಪಕ್ಷದ ಮುಖಂಡರ ಸಮಾಲೋಚನೆ ಸಭೆಯನ್ನು ಕರೆಯಲಾಗಿದೆ.
ರಾಜ್ಯದ ಪ್ರಬಲ ವಿರೋಧದ ನಡುವೆಯೂ ಕೇಂದ್ರ ಸರಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ವಿಧಾನಮಂಡಲ ಉಭಯ ಸದನಗಳ ನಾಯಕರು, ರಾಜ್ಯದ ಎಲ್ಲ ಸಂಸದರು ಹಾಗೂ ಕಾವೇರಿ ನದಿ ಪಾತ್ರವನ್ನು ಪ್ರತಿನಿಧಿಸುವ ಶಾಸಕರನ್ನು ಆಹ್ವಾನಿಸಲಾಗಿದೆ. ಸಂಸತ್ತಿನಲ್ಲಿ ಚರ್ಚೆಯಾದ ಬಳಿಕವೇ ಮಂಡಳಿ ರಚನೆಯಾಗಬೇಕು ಎಂಬ ರಾಜ್ಯದ ವಾದಕ್ಕೆ ಮನ್ನಣೆ ಸಿಕ್ಕಿಲ್ಲ.
ಮಂಡಳಿ ರಚನೆಯಿಂದಾಗಿ ರಾಜ್ಯವು ತನ್ನ ಪಾಲಿಗೆ ನಿಗದಿಯಾಗಿರುವ ನೀರನ್ನು ಬಳಸಿಕೊಳ್ಳುವ ವಿಚಾರದಲ್ಲೂ ಸ್ವತಂತ್ರ ತೀರ್ಮಾನ ಕೈಗೊಳ್ಳಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ಹೆಜ್ಜೆ ಏನಿರಬೇಕು ಮತ್ತು ಕಾನೂನು ಹೋರಾಟ ಸೂಕ್ತವೇ ಎಂಬ ಕುರಿತು ಸಭೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.