ಚಿಕ್ಕಬಳ್ಳಾಪುರ: ಎಸ್ಎಲ್ಎನ್ ಗ್ಯಾಸ್ ಏಜೆನ್ಸಿಗೆ ಸೇರಿದ ಹೆಚ್ಪಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ ಬರೋಬ್ಬರಿ 900ಕ್ಕೂ ಹೆಚ್ಚು ಸಿಲಿಂಡರ್ಗಳು ಸ್ಫೋಟಗೊಂಡು ಭಾರೀ ಅನಾಹುತಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಾಪುರದಲ್ಲಿ ಸಂಭವಿಸಿದೆ.
ರಾತ್ರಿ ಸುಮಾರು 11 ಗಂಟೆ ಬಳಿಕ ಅನಾಹುತ ಸಂಭವಿಸಿದ್ದು, ರಾತ್ರಿಯಿಡೀ ಸಿಲಿಂಡರ್ಗಳು ಪಟಾಕಿಯಂತೆ ನಿರಂತರವಾಗಿ ಸ್ಫೋಟಿಸಿವೆ. ಸ್ಫೋಟದ ತೀವ್ರತೆ 3 ಕಿಲೋಮೀಟರ್ ವ್ಯಾಪ್ತಿಯಷ್ಟು ಹರಡಿದೆ. ಸರಿಸುಮಾರು 1 ಕಿಲೋಮೀಟರ್ ದೂರದವರೆಗೂ ಸಿಲಿಂಡರ್ನ ತುಂಡುಗಳು ಬಿದ್ದಿವೆ.
ಸ್ಫೋಟದ ಸುದ್ದಿ ತಿಳಿದು ಸ್ಥಳಕ್ಕೆ ಬಂದ 3 ಅಗ್ನಿಶಾಮಕ ಪಡೆಗಳು ಸಮರೋಪಾದಿಯಲ್ಲಿ ಬೆಂಕಿ ನಂದಿಸುವ ಕೆಲಸ ಮಾಡಿದವು. ಆದ್ರೆ ಅಷ್ಟೊತ್ತಿಗಾಗಲೇ ಸಾಕಷ್ಟು ಹಾನಿ ಆಗಿ ಹೋಗಿತ್ತು. ಮಲಗಿದ್ದ ವೇಳೆ ಸ್ಫೋಟದ ಸದ್ದು ಕೇಳಿದ ತಿಮ್ಮಾಪುರ ಸುತ್ತಮುತ್ತಲ ಗ್ರಾಮಸ್ಥರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಗ್ಯಾಸ್ ಸಿಲಿಂಡರ್ ಸಿಡಿತದ ಸದ್ದು ಕೇಳಿ ಬೆಚ್ಚಿಬಿದ್ದ ಪಕ್ಕದ ವಸತಿ ಶಾಲೆ ಮಕ್ಕಳು ಮಧ್ಯರಾತ್ರಿ ದಿಕ್ಕಾಪಾಲಾಗಿ ಓಡಿದ್ದಾರೆ.