ಬೆಂಗಳೂರು: ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ ಹಿನ್ನಲೆ ಅಧಿಕಾರ ಕಳೆದುಕೊಂಡಿದ್ದ ಜಾರ್ಜ್ ಅವರು ಇಂದು ಮತ್ತೆ ಅಧಿಕಾರಕ್ಕೆ ಮರಳಿದ್ದಾರೆ.
ರಾಜ್ಯಪಾಲ ವಜುಭಾಯಿ ಆರ್.ವಾಲಾ ಅವರು ಜಾರ್ಜ್ ಅವರಿಗೆ ರಾಜಭವನದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಬೆಳಗ್ಗೆ 10.15 ಕ್ಕೆ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಿ ಇದರ ಮೂಲಕ ಜಾರ್ಜ್ ಅವರು 2ನೇ ಸಲ ಸಿ.ಎಂ ಸಿದ್ಧರಾಮಯ್ಯ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಈ ಸಂದರ್ಭ ಸಿ.ಎಂ ಸಿದ್ಧರಾಮಯ್ಯ, ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ, ಸಚಿವ ಹೆಚ್ ಎಸ್ ಮಹದೇವ ಪ್ರಸಾದ್, ರಾಮಲಿಂಗಾ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ಕೆ.ಜೆ ಜಾರ್ಜ್ ಅವರಿಗೆ ಮತ್ತೆ ನೀಡುವ ಸಾಧ್ಯತೆ ಇದ್ದು, ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಪ್ರಮಾಣ ವಚನ ಸ್ವೀಕಾರದ ನಂತರ ಶಿಫಾರಸು ಮಾಡಲಿದ್ದು, ನಂತರ ಜಾರ್ಜ್ ಅವರ ಖಾತೆ ನಿಗದಿಯಾಗಲಿದ್ದು, ಜಾರ್ಜ್ ಇಂದು 2ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಡಿವೈಎಸ್ ಪಿ ಗಣಪತಿ ನೇಣಿಗೆ ಶರಣಾಗುವ ಮುನ್ನ ಗೃಹ ಸಚಿವ ಜಾರ್ಜ್ ಸೇರಿದಂತೆ ಇನ್ನಿಬ್ಬರು ಪೋಲೀಸ್ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿರುವುದಾಗಿ ಹತ್ತಿರದ ನ್ಯೂಸ್ ಚಾನೆಲ್ ಗೆ ಸಂದರ್ಶನ ನೀಡಿದ್ದರು. ಈ ಹಿನ್ನೆಲೆ ನ್ಯಾಯಾಲಯ ಜಾರ್ಜ್ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಆದೇಶ ನೀಡಿತ್ತು. ಇದರಿಂದ ಜಾರ್ಜ್ ರಾಜಿನಾಮೆ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿ.ಎಂ ಸಿದ್ಧರಾಮಯ್ಯ ಅವರು ಎ.ಕೃಷ್ಣಪ್ಪ ಅವರನ್ನು ಖಾಲಿ ಇದ್ದ ಎರಡು ಸ್ಥಾನಗಳಲ್ಲಿ ಒಂದರಲ್ಲಿ ಈಗಾಗಲೇ ಸಂಪುಟಕ್ಕೆ ಸೇರ್ಪಡೆಮಾಡಿಕೊಂಡಿದ್ದು, ಇದೀಗ ಸಿಐಡಿ ಕ್ಲೀನ್ ಚಿಟ್ ನೀಡಿದ ಹಿನ್ನೆಲೆ ಇನ್ನೊಂದು ಸ್ಥಾನದಲ್ಲಿ ಜಾರ್ಜ್ ಅವರು ಮತ್ತೆ ಸಂಪುಟಕ್ಕೆ ಸೇರಿಕೊಂಡಿದ್ದಾರೆ.