ಬೆಂಗಳೂರು: ಹಿಜಾಬ್ ಸಂಬಂಧಿಸಿ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ತೀರ್ಪು ಬಂದು ಎರಡು ದಿನಗಳಾದರೂ ಈ ಬಗ್ಗೆ ಚರ್ಚೆಗಳು ಮಾತ್ರ ಮುಗಿದಿಲ್ಲ, ಗುರುವಾರವೂ ವಿಧಾನಸಭೆ ಅಧಿವೇಶನದಲ್ಲಿ ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ಬಗ್ಗೆ ಚರ್ಚೆಯಾಯ್ತು. ಯಾರು ಏನು ಹೇಳಿದ್ದಾರೆ ನೋಡಿ…
ಶಾಸಕ ಜಗದೀಶ ಶೆಟ್ಟರ್:
ಹೈಕೋರ್ಟ್ ನಿರ್ಧಾರ ಆದ ನಂತರ ಮನವಿ ಸಲ್ಲಿಸಲು ಅವಕಾಶವಿದೆ. ಅದನ್ನು ಸಾರ್ವಜನಿಕವಾಗಿ ವಿರೋಧಿಸುತ್ತಾರೆ, ತೀರ್ಪಿನ ವಿರುದ್ಧ ಬಂದ್ ಕರೆ ನೀಡುತ್ತಾರೆ ಎಂದರೆ ನ್ಯಾಯಾಲಯಕ್ಕೆ ಕಿಮ್ಮತ್ತು ಇಲ್ಲವೇ? ಸರಕಾರದ ಆದೇಶಗಳಿಗೆ ಹೋರಾಟ ಮಾಡುವುದು, ಪ್ರತಿಭಟಿಸುವುದು ಬೇರೆ. ಆದರೆ ಕೋರ್ಟಿನ ತೀರ್ಪುಗಳಿಗೂ ಹೋರಾಟ ಮಾಡುತ್ತಾರೆಂದರೆ, ಇದಕ್ಕೆ ಕೊನೆಯೇ ಇಲ್ಲ ಎಂದಾಗುತ್ತದೆ. ಇದಕ್ಕೆ ಯಾರೂ ಪ್ರೋತ್ಸಾಹಿಸಬಾರದು, ಸರಕಾರ ಬಿಗಿ ಕ್ರಮ ತೆಗೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ಯಾರು ಬೇಡ ಅಂತಾರೆ. ಅದು ಬಿಟ್ಟು ಹೀಗೆ ವಿರೋಧ ಮಾಡುವುದು ಸರಿಯಲ್ಲ.
ವಿಪಕ್ಷ ನಾಯಕ ಸಿದ್ದರಾಮಯ್ಯ:
ಕೋರ್ಟ್ನ ಆದೇಶವನ್ನು ಗೌರವಿಸಬೇಕು. ಕೋರ್ಟ್ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸುವ ಹಕ್ಕು ಇದೆ. ಅಸಮಾಧಾನ ಇದೆ ಎಂದು ಶಾಂತಿಯುತ ಬಂದ್ ಮಾಡಿದರೆ ಅದನ್ನು ಸರಕಾರ ಪ್ರಶ್ನಿಸಲು, ನಿಲ್ಲಿಸಲು ಸಾಧ್ಯವೇ? ಶಾಂತಿಯುತ ಬಂದ್ಗೆ ಅವಕಾಶವಿದೆ.
ವಿಪಕ್ಷ ಉಪನಾಯಕ ಯು.ಟಿ. ಖಾದರ್:
ಮೊನ್ನೆ ಯಾರು ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ, ಅವರಿಗೆ ಇನ್ನೊಂದು ಅವಕಾಶ ನೀಡಬೇಕು. ವಿದ್ಯಾರ್ಥಿಗಳು ನಮ್ಮ ಮಕ್ಕಳು ಎಂಬಂತೆ ಸರಕಾರ ತೀರ್ಮಾನ ತೆಗೆದುಕೊಳ್ಳಬೇಕು. ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಮಾನ ಕೊಟ್ಟದ್ದನ್ನು ಸ್ಥಳೀಯ ಸರಕಾರ ಮುಂದೆ ನಿಂತು ಉತ್ತಮ ರೀತಿಯಲ್ಲಿ ಅನುಷ್ಠಾನಿಸಬೇಕು. ಎರಡೂ ನ್ಯಾಯಾಲಯಗಳ ತೀರ್ಪನ್ನು ಬದಿಗಿಟ್ಟು, ಸ್ಥಳೀಯ ಮಟ್ಟದಲ್ಲಿ ವಾತಾವರಣ ಹಾಳಾಗದಂತೆ ಚೆನ್ನಾಗಿ ನಡೆಯುವಂತೆ ಮಾಡಿದ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಧಾರ್ಮಿಕ ಮುಖಂಡರು ಕೊಟ್ಟಿರುವ ಕರೆ ಅಸಮಾಧಾನವನ್ನು ತೋರ್ಪಡಿಸುತ್ತಿರುವುದು. ಅದು ಅಗೌರವ ಎಂದಲ್ಲ. ಕೋರ್ಟ್ ಅದನ್ನು ನೋಡಿಕೊಳ್ಳುತ್ತದೆ. ನಾವು ಅದಕ್ಕೆ ಚರ್ಚೆ ಮಾಡುವುದು ಬೇಡ.
ಶಾಸಕ ಸಿ.ಟಿ. ರವಿ:
ನ್ಯಾಯಾಲಯ 10 ದಿನ ವಾದ-ಪ್ರತಿವಾದವನ್ನು ಆಲಿಸಿ, ಆನಂತರ ಪ್ರತಿಯೊಂದು ಪ್ರಶ್ನೆಗೂ ತನ್ನ ತೀರ್ಪಿನಲ್ಲಿ ಉತ್ತರ ನೀಡಿದೆ. ತೀರ್ಪು ಬಂದ ನಂತರ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಸಾರ್ವಜನಿಕವಾಗಿ ವಾತಾವರಣ ಹಾಳು ಮಾಡಿ, ಬೆದರಿಕೆ ಹಾಕುವುದಕ್ಕೆ ಅವಕಾಶವಿದೆಯಾ? ಸಾರ್ವಜನಿಕ ಅಭಿಪ್ರಾಯ ರೂಪಿಸಲು ಅವಕಾಶವಿದೆ ಎಂದು ಸಾರ್ವಜನಿಕ ವಾತಾವರಣ, ಶೈಕ್ಷಣಿಕ ವಾತಾವರಣ ಹಾಳು ಮಾಡಲು ಅವಕಾಶವಿದೆಯಾ? ಇಷ್ಟಕ್ಕೂ ಇದು ಈ ಸದನದಲ್ಲಿ ಚರ್ಚೆಯಾಗಬೇಕಿರುವ ವಿಷಯವಾ? ಶಾಲಾ ಕಾಲೇಜಿನಲ್ಲಿ ಯೂನಿಫಾರ್ಮ್ ಬೇಕೋ ಬೇಡವೋ ಎಂಬುದಕ್ಕೆ ಯೂನಿಫಾರ್ಮ್ನ ಅರ್ಥವೇನು? ಯಾರೇ ಆಗಲಿ ಇದರಲ್ಲಿ ಓಟ್ ಬ್ಯಾಂಕ್ ರಾಜಕಾರಣದ ಕೆಲಸ ಮಾಡುವುದು ಮಹಾ ಪಾಪದ ಕೆಲಸ, ಇದರಲ್ಲಿ ಓಟ್ ಬ್ಯಾಂಕ್ ರಾಜಕಾರಣದ ಹೀನ ಕೆಲಸ ಮಾಡುತ್ತಾರಲ್ಲ ಅದು ಪಾಪದ ಕೆಲಸ.