ಬೆಂಗಳೂರು: ಇಲ್ಲಿನ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣ ಜಿಕೆವಿಕೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ವಾರ್ಷಿಕ ಕೃಷಿ ಮೇಳಕ್ಕೆ ಚಾಲನೆ ಸಿಕ್ಕಿದೆ.
ಮೊದಲ ಬಾರಿಗೆ ರೈತ ಮಹಿಳೆಯೊಬ್ಬರು ಮೇಳ ಉದ್ಘಾಟಿಸಿದ್ದು, ಮೈಸೂರು ಜಿಲ್ಲೆಯ ನಾಗರಹೊಳೆಯ ಪುನರ್ವಸತಿಯ ವನವಾಸಿ ಮಹಿಳೆ ಪ್ರೇಮಾ ದಾಸಪ್ಪ ಅವರು ಮೇಳಕ್ಕೆ ಚಾಲನೆ ನೀಡಿದರು.
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಿಲ್ಲ. ಕೃಷಿ ವಿವಿ ಕುಲಪತಿ ಡಾ. ರಾಜೇಂದ್ರಪ್ರಸಾದ್, ಕೃಷಿ ತಜ್ಞ ಡಾ.ಅಯ್ಯಪ್ಪನ್ನ ಮತ್ತಿತರರು ಭಾಗಿಯಾಗಿದ್ದಾರೆ.
ಇದೇ ವೇಳೆ ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಧಕ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಟಿ ಜಿಟಿ ಮಳೆ ಮಧ್ಯೆ ಕೃಷಿ ಮೇಳ ಆರಂಭವಾಗಿದೆ. ಮಳೆಯಿಂದಾಗಿ ಮಳಿಗೆಗಳ ಬಳಿ ಕೆಸರಿನ ಸ್ಥಿತಿ ಇದೆ. ಸಾರ್ವಜನಿಕರು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಮಳಿಗೆಗಳತ್ತ ತೆರಳಿ, ಮಾಹಿತಿಯನ್ನು ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ರೈತರ ಆದಾಯ ದ್ವಿಗುಣಕ್ಕೆ ವಿವಿಯು ಪ್ರಾತ್ಯಕ್ಷಿಕೆ ಮಾದರಿಯನ್ನು ಅಭಿವೃದ್ಧಿ ಪಡಿಸಿದೆ. ಎಣ್ಣೆ ಕಾಳು ಬೆಳೆಗಳ ಅಭಿವೃದ್ಧಿಗಾಗಿ ವಿವಿದ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಜಾನುವಾರುಗಳು ಕೃಷಿ ಮೇಳದ ಆಕರ್ಷಣೆಯಾಗಿವೆ. ಹೋರಿ, ಹೋತ, ಮೇಕೆಗಳು ಪ್ರದರ್ಶನದಲ್ಲಿದ್ದು, ಸಾರ್ವಜನಿಕರನ್ನು ಸೆಳೆಯುತ್ತಿವೆ.