ಬೆಂಗಳೂರು: ರಂಗಭೂಮಿಗೂ ಕೋವಿಡ್ ಸಾಂಕ್ರಾಮಿಕದ ಪರಿಣಾಮ ತಟ್ಟಿದೆ. ಸುಮಾರು ಎರಡು ವರ್ಷ ಕಾಲ ರಂಗಭೂಮಿ ಚಟುವಟಿಕೆಯೇ ನಿಂತು ಹೋಗಿದೆ. ಈ ಮಧ್ಯೆ ಭರವಸೆಯ ಆಶಾ ಕಿರಣ ಮೂಡಿಸಿದೆ ‘ಪರ್ವ’.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನ ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ಪರ್ವ ನಾಟಕ ಪ್ರದರ್ಶನಗೊಂಡಿತು. ಎರಡು ವರ್ಷಗಳ ಬಳಿಕ ರವೀಂದ್ರ ಕಲಾಕ್ಷೇತ್ರದ ಎಲ್ಲ ಆಸನಗಳು ಭರ್ತಿಯಾದದ್ದು ವಿಶೇಷ. ಟಿಕೆಟ್ಗಳು ರವೀಂದ್ರ ಕಲಾಕ್ಷೇತ್ರದ ಕೌಂಟರ್ ಹಾಗೂ ಆನ್ಲೈನ್ನಲ್ಲಿ ಪಡೆಯಲು ಅವಕಾಶವಿತ್ತು.
ಶನಿವಾರ ಮತ್ತು ಭಾನುವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಡೆದ ನಾಟಕ ಪ್ರದರ್ಶನದ ಎಲ್ಲ ಟಿಕೆಟ್ಗಳು ಎರಡು ದಿನ ಹಿಂದೆಯೇ ಸೋಲ್ಡ್ ಔಟ್ ಆಗಿದ್ದವು. 500 ಹಾಗೂ 250 ರೂ. ಟಿಕೆಟ್ ದರ ನಿಗದಿ ಪಡಿಸಲಾಗಿತ್ತು.
ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಕಾದಂಬರಿಗೆ ದೊಡ್ಡದಾದ ಬಳಗವಿದೆ. ಭೈರಪ್ಪ ಅವರ ಕಾದಂಬರಿ ಆಧರಿಸಿದ ಈ ನಾಟಕವನ್ನು ನಿರ್ದೇಶಿಸಿದ್ದು ರಂಗಕರ್ಮಿ ಪ್ರಕಾಶ್ ಬೆಳವಾಡಿ. ಪರ್ವ ಎಂಟು ತಾಸುಗಳ ನಾಟಕ. ಮೈಸೂರಿನಲ್ಲಿ ಈ ನಾಟಕದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ನಿರೀಕ್ಷೆಯಂತೆ ಬೆಂಗಳೂರಿನಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾಟಕ ಮುಗಿಯುತ್ತಿದ್ದಂತೆ ಪ್ರೇಕ್ಷಕರು ಎದ್ದುನಿಂತು ಕರತಾಡನ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾತಾಡ್ ಮಾತಾಡ್ ಕನ್ನಡ ಅಭಿಯಾನದಲ್ಲಿ ರಾಜ್ಯದ ವಿವಿಧೆಡೆ ಪರ್ವ ನಾಟಕದ ಪ್ರದರ್ಶನ ಏರ್ಪಾಡಾಗಿದೆ.