ಬೆಂಗಳೂರು: ಮೈ ಮುರಿದು ದುಡಿದು ತಿನ್ನುವ ಬದಲಿಗೆ ಇಬ್ಬರು ಸಹೋದರರು ಸುಲಭದಲ್ಲಿ ಬದುಕುವ ದಾರಿ ಕಲಿಯಲು ಹೋಗಿ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಸ್ಕೂಟರ್ ಹೊಂದಿದ್ದ ಇಬ್ಬರು ಆರೋಪಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತಿದ್ದ ವೃದ್ದೆಯ ಸರ ಎಗರಿಸಿ ಪೋಲೀಸರ ಅತಿಥಿಗಳಾಗಿದ್ದಾರೆ. ಬಂಧಿತರನ್ನು ಕಾಮಾಕ್ಷಿಪಾಳ್ಯ ನಿವಾಸಿಗಳಾದ ಸುದೀಪ್ ಹಾಗೂ ರಜತ್ ಎಂದು ಗುರುತಿಸಲಾಗಿದೆ.
ಜುಲೈ 6ರಂದು ವಿದ್ಯಾರಣ್ಯಪುರದ ಎಂಪಿಎ ಲೇಔಟಿನಲ್ಲಿ ಆರೋಪಿಗಳು ಸರಗಳ್ಳತನ ಮಾಡಿದ್ದು, 62 ವರ್ಷದ ವೃದ್ಧೆಯ ಸರಗಳ್ಳತನ ಮಾಡಿ, ಪರಾರಿಯಾಗಿದ್ದರು. ಆರೋಪಿಗಳ ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಬಂಧನದಿಂದ 2 ಸರ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಇಬ್ಬರು ಕಳ್ಳರು ಸಹ ಸಹೋದರರು. ಲಾಕ್ಡೌನ್ ನಲ್ಲಿ ಕೆಲಸವಿಲ್ಲದೆ ಸರಗಳ್ಳತನಕ್ಕಿಳಿದಿದ್ದರು. ಪದವಿ ವ್ಯಾಸಂಗ ಮುಗಿಸಿದ್ದ ಸುದೀಪ್ ಹಾಗೂ ರಜತ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಲಾಕ್ಡೌನ್ ನಲ್ಲಿ ಕೆಲಸವಿಲ್ಲದೆ ಪರಿತಪಿಸಿದ್ದರು. ಕೆಲಸ ಸಿಗದ್ದರಿಂದ ಹಣಕ್ಕಾಗಿ ಸರಗಳ್ಳತನ ಮಾಡಲು ಮುಂದಾಗಿ ಇದೀಗ ಜೈಲು ಸೇರಿದ್ದಾರೆ.