ಬೆಂಗಳೂರು, ನ.18 : ರೈಲಿನಲ್ಲಿ ಪ್ರಯಾಣಿಸುವಾಗ ಸೆಲಿ ತೆಗೆದುಕೊಳ್ಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದ ಯುವಕನೊಬ್ಬನ ಶವ ಪತ್ತೆಯಾಗಿದ್ದು ರೈಲ್ವೆ ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಅಣ್ಣೆಚಕ್ಕನಹಳ್ಳಿ ಗ್ರಾಮದ ಅಭಿಷೇಕ್ ಎ.ಎಸ್. (19) ಮೃತಪಟ್ಟಿದ್ದಾನೆ.
ಮೂರು ತಿಂಗಳ ಹಿಂದೆ ಬೆಂಗಳೂರಿನ ಗಾಂನಗರದ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ನವೆಂಬರ್ 6 ರಂದು ತನ್ನ ಸ್ನೇಹಿತರಿಗೆ ಕರೆ ಮಾಡಿ ಊರಿನಲ್ಲಿ ಅಂತರಲಿಂಗೇಶ್ವರ ದೇವಸ್ಥಾನದ ಸ್ಥಾಪನೆ ಇದೆ, ಎಲ್ಲರೂ ಅಲ್ಲಿಗೆ ಒಟ್ಟಿಗೆ ಹೋಗೋಣ ಬನ್ನಿ ಎಂದು ಆಹ್ವಾನಿಸಿದ್ದಾನೆ, ಅದರಂತೆ ಅಂದು ರಾತ್ರಿ 10 ಗಂಟೆಗೆ ಎಲ್ಲರೂ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದಾರೆ, ಅಭಿಷೇಕ್ ಮತ್ತು ಆತನ ನಾಲ್ವರು ಸ್ನೇಹಿತರು ರೈಲಿನಲ್ಲಿ ಹೊರಟಿದ್ದಾರೆ,
ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಮಂಡ್ಯ ಮತ್ತು ಪಾಂಡವಪುರ ನಡುವೆ ಅಭಿಷೇಕ್ ಫೋಟೋ ತೆಗೆದುಕೊಳ್ಳಲು ಒಂದು ಕೈಯಲ್ಲಿ ರೈಲ್ವೆ ಬೋಗಿಯ ಕಂಬಿ ಹಿಡಿದುಕೊಂಡು ಜೋತಾಡಿದ್ದಾನೆ. ಆದರೆ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಎಲ್ಲರೂ ಪಾಂಡವಪುರದಲ್ಲಿ ಇಳಿದು ವಾಪಸ್ ನಡೆದುಕೊಂಡು ಬಂದು ಆತ ಕಳೆದು ಹೋದ ಜಾಗದಲ್ಲಿ ಹುಡುಕಾಡಿದರೂ ಅಭಿಷೇಕನ ಸುಳಿವು ಸಿಕ್ಕಿರಲಿಲ್ಲ ಅಲ್ಲಿಂದ ಇಬ್ಬರು ಸ್ನೇಹಿತರು ಊರಿಗೆ ವಾಪಸ್ಸಾಗಿದ್ದು, ಉಳಿದಿಬ್ಬರು ಬೆಂಗಳೂರಿಗೆ ಬಂದಿದ್ದರು.
ಕಾರ್ಯಕ್ರಮಕ್ಕೆ ಊರಿಗೆ ಮಗ ಬಾರದೆ ಇದ್ದಾಗ ಫೋಷಕರು ಗಾಬರಿಗೊಂಡು ನವೆಂಬರ್ 8 ರಂದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣ ದಾಖಲಿಸಿದ ಪೊಲೀಸರು ಆತನ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ವಿಚಾರಣೆ ನಡೆಸಿದಾಗ ರೈಲು ಪ್ರಯಾಣದ ವೇಳೆ ಆತ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ಸ್ನೇಹಿತರನ್ನು ಕರೆದುಕೊಂಡು ಪೊಲೀಸರು ಸ್ಥಳಕ್ಕೆ ತೆರಳಿದ್ದು ಮಂಡ್ಯ ಜಿಲ್ಲೆ ಪೊಲೀಸರು, ಅಗ್ನಿಶಾಮಕದಳ, ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಹುಡುಕಾಟ ಆರಂಭಿಸಿದರು. ನವೆಂಬರ್ 6 ರಿಂದ 3 ದಿನಗಳ ಕಾಲ ನಿರಂತರವಾಗಿ ಮಳೆ ಸುರಿದಿದ್ದರಿಂದ ಅಭಿಷೇಕ್ ತಾನು ಬಿದ್ದ ಜಾಗದಿಂದ 6-7 ಕಿಲೋಮೀಟರ್ ತೇಲಿಕೊಂಡು ಹೋಗಿದ್ದ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ನಿನ್ನೆ ಆತನ ಫೋನ್ ಸಿಕ್ಕಿದೆ. ರೈಲಿನಿಂದ ಜೋತು ಬಿದ್ದಿದ್ದ ಆತ ಸೇತುವೆಯೊಂದಕ್ಕೆ ಬಡಿದು ಕೆಳಗೆ ಬಿದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದಿರಿ ಪ್ರಾಣಪಾಯವಾಗುವಂತಹ ಹುಡುಗಾಟಗಳನು ಮಾಡಬೇಡಿ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮನವಿ ಮಾಡಿದ್ದಾರೆ.