ಬೆಂಗಳೂರು: ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮುಂತಾದ ಯಾವುದೇ ಪತ್ರಗಳಲ್ಲಿ ಇನ್ನು ಮುಂದೆ ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರುಗಳನ್ನು ಪರಿಗಣಿಸದಿರಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಇತ್ತೀಚೆಗೆ ಎಲ್ಲಾ ಕಚೇರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದ್ದಾರೆ. ಅನಾಮಧೇಯ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳದಂತೆ ಮತ್ತು ಮಾನ್ಯವಾದ ಹೆಸರು ಮತ್ತು ವಿಳಾಸಗಳನ್ನು ಹೊಂದಿರುವ ದೂರುಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಎಲ್ಲಾ ಇಲಾಖೆ ಮುಖ್ಯಸ್ಥರು ಮತ್ತು ಸಿಬ್ಬಂದಿಗೆ ತಿಳಿಸಲಾಗಿದೆ.
ಪ್ರಮುಖವಾಗಿ ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳ ಸಂಬಂದ ಸರ್ಕಾರಕ್ಕೆ ಪ್ರತಿ ವರ್ಷ ನೂರಾರು ಅನಾಮಧೇಯ ಪತ್ರಗಳು ಬರುತ್ತವೆ, ಪತ್ರದ ಮೇಲೆ ಗುರುತು, ವಿಳಾಸ ಬರೆದರೆ ಅಪಾಯದ ಸಾಧ್ಯತೆಯಿರುವ ಕಾರಣ ದೂರುದಾರರು ತಮ್ಮ ಹೆಸರು ಮತ್ತು ವಿಳಾಸ ನಮೂದಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಇದಕ್ಕಾಗಿ ದೇಶದಲ್ಲಿ ಆರ್ ಟಿ ಐ ಕಾರ್ಯಕರ್ತರು ಮತ್ತು ಪತ್ರಕರ್ತರು ತಮ್ಮ ಪ್ರಾಣವನ್ನೇ ತೆತ್ತಿರುವ ಘಟನೆಗಳು ನಡೆದಿವೆ. ಮಹತ್ವದ ಮಾಹಿತಿಗಳನ್ನು ನೀಡುವ ಮಾಹಿತಿದಾರರಿಗೆ ರಕ್ಷಣೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಜವಾಬ್ದಾರಿಯಿಲ್ಲ, ಸರ್ಕಾರದ ಈ ನಿರ್ಧಾರ ನನಗೆ ಅಚ್ಚರಿ ತಂದಿಲ್ಲ, ಶವ ಪೆಟ್ಟಿಗೆಗೆ ಹೊಡೆಯಯುತ್ತಿರುವ ಕೊನೆಯ ಮೊಳೆ ಇದಾಗಿದೆ ಎಂದು ಐ ಪೇಯ್ಡ್ ಬ್ರೈಬ್ ಅಭಿಯಾನದ ಮೂಲದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಟಿ ಆರ್ ರಘುನಂದನ್ ಹೇಳಿದ್ದಾರೆ.
ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುುಳುಗಿವೆ, ಕರ್ನಾಟಕ ಕೂಡ ದೇಶದ ಅತ್ಯಂತ ಭ್ರಷ್ಟ ರಾಜ್ಯಗಳ ಪಟ್ಟಿಯಲ್ಲಿದೆ ಎಂದು ತಿಳಿಸಿದ್ದಾರೆ. ನಮ್ಮಲ್ಲಿ ಆರ್ಟಿಐ ಕಾರ್ಯಕರ್ತರನ್ನು ಬೆದರಿಸಿರುವ ಮತ್ತು ಶಿಕ್ಷಿಸುವ ಪ್ರಕರಣಗಳು ನಡೆದಿವೆ. ಆರ್ಟಿಐ ಕಾಯ್ದೆಯಡಿ ಮೇಲ್ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಹೀಗಾಗಿ ಸುಮಾರು 20,000-30,000 ಮೇಲ್ಮನವಿಗಳು ಬಾಕಿ ಉಳಿದಿವೆ ಎಂದು ಅವರು ಹೇಳಿದ್ದಾರೆ.