ವಿಜಯಪುರ : ಈ ಸಮಾಜದಲ್ಲಿ ನ್ಯಾಯವಾದಿಗಳ ಪಾತ್ರ ಪ್ರಮುಖವಾಗಿದ್ದು, ಅವರಿಂದ ಸಂವಿಧಾನ ರಕ್ಷಣೆ ಸಾಧ್ಯ ಎಂದು ಪ್ರೊ.ರಾಜು ಆಲಗೂರ ಹೇಳಿದರು.ಇಲ್ಲಿನ ಜಿಲ್ಲಾ ನ್ಯಾಯವಾದಿಗಳ ಸಂಘದ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನ್ಯಾಯವಾದಿಗಳನ್ನು ಉದ್ದೇಶಿಸಿ ಮಾತನಾಡಿ, ಈ ಸಲ ಬದಲಾವಣೆಗೆ ತಮಗೆ ಬೆಂಬಲ ನೀಡುವಂತೆ ಕೇಳಿದರು.
ಕೇಂದ್ರ ಸರಕಾರ ಎಲ್ಲ ನಿಟ್ಟಿನಲ್ಲೂ ಅನ್ಯಾಯ ಮಾಡಿದೆ. ರಾಜ್ಯದ ಪಾಲು ನೀಡಿಲ್ಲ, ರೈತರ ಸಾಲ ತೀರಿಸಿಲ್ಲ, ಯೋಗ್ಯ ಬೆಲೆ ನೀಡಿಲ್ಲ. ಅದರ ಬದಲಾಗಿ ಉಳ್ಳವರ ಸಾಲ ಮನ್ನಾ ಮಾಡಿದೆ. ಬಿಜೆಪಿ ಜನ ವಿರೋಧಿ ನೀತಿಗಳನ್ನು ಮಾಧ್ಯಮಗಳು ಸೇರಿ ಯಾರೂ ಪ್ರಶ್ನಿಸಿಲ್ಲ. ಏನಾದರೂ ಕೇಳಿದರೆ ಅವರ ಮೇಲೇ ದೌರ್ಜನ್ಯ ನಡೆಸಲಾಗುತ್ತಿದೆ. ವಕೀಲರಾದ ನೀವುಗಳು ಸರಿಯಾದ ನಿರ್ಧಾರ ಮಾಡಿ ತಮಗೆ ಬೆಂಬಲ ನೀಡಿದರೆ ವಿಜಯಪುರದ ಏಳ್ಗೆಗೆ ಶ್ರಮಿಸುವೆ. ಇಲ್ಲಿ ಕೇಂದ್ರೀಯ ವಿವಿ ಸ್ಥಾಪಿಸಲಾಗಯವುದು. ತೋಟಗಾರಿಕೆ ಬೆಳೆಗಳಿಗೆ, ರೈಲುಗಳಿಗೆ, ವಿಮಾನಯಾನಕ್ಕೆ ಕೇಂದ್ರದಲ್ಲಿ ದನಿಯಾಗುವೆ ಎಂದು ಹೇಳಿದರು.
ಅವಳಿ ಜಿಲ್ಲೆಯ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಮಾತನಾಡಿ, ಬ್ರಿಟೀಷರು ದೇಶದಲ್ಲಿ ವಿಜಯಪುರ ಸೇರಿ ಎರಡೇ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಿದ್ದರು. ಅಂತಹ ಜಿಲ್ಲೆ ಅರವತ್ತೈದು ವರ್ಷಗಳ ನಂತರ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲರಿಂದ ಶ್ರಮದಿಂದ ಈಗ ನೀರು ಕಂಡು ಅಭಿವೃದ್ಧಿ ಹೊಂದಿದೆ. ಅದರಂತೇ ಲೋಕಸಭೆಯಲ್ಲಿ ಆಲಗೂರರು ಗೆದ್ದರೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲಿದ್ದಾರೆ. ಸದ್ಯದ ಸಂಸದರು ಮೂರು ಅವಕಾಶ ಪಡೆದರೂ ಏನೂ ಮಾಡಲಿಲ್ಲ ಎಂದರು.
ನಾನು ಪರಿಷತ್ನಲ್ಲಿ ಧ್ವನಿ ಎತ್ತಿ ಗ್ರಾಪಂ ಅಧ್ಯಕ್ಷ, ಸದಸ್ಯರ ಭತ್ಯೆ ಐನೂರು ರೂ.ಇರುವುದನ್ನು ಆರು ಸಾವಿರ ರೂ. ಹಾಗೂ ಎರಡು ಸಾವಿರಕ್ಕೆ ಹೆಚ್ಚಿಸಲು ಶ್ರಮಿಸಿದ್ದೇನೆ. ಇಂತಹ ಕೆಲಸಗಳಾಗಲು ಲೋಕಸಭೆಯಲ್ಲೂ ನಮ್ಮವರು ಇರಬೇಕು ಎಂದು ಮನವಿ ಮಾಡಿದರು.
ಹಿರಿಯ ವಕೀಲ ಸುಭಾಶ ಛಾಯಾಗೋಳ, ಎರಡು ನೂರಾ ನಲವತ್ತು ಜನ ಅಪರಾಧಿಗಳು ಲೋಕಸಭೆಯಲ್ಲಿದ್ದಾರೆ. ಪ್ರಧಾನಿ ಬೆರಳೆಣಿಕೆ ದಿನಗಳಷ್ಟೇ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಅವರು ಒಂದೇ ಒಂದು ಪ್ರೆಸ್ ಮೀಟ್ ನಡೆಸಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರತ್ನಪ್ರಭಾ ಅವರು ನೋಟ್ ಬಂದಿ ಜನಹಿತದ್ದಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇಂತಹ ಸರಕಾರ ನಮಗೆ ಬೇಕೆ ಎನ್ನುವುದು ಪ್ರಜ್ಞಾವಂತರಾದ ನೀವು ಯೋಚಿಸಬೇಕು ಎಂದು ಹೇಳಿದರು.
ರಾಜ್ಯ ಸರಕಾರ ವಕೀಲರ ಪರವಾಗಿದೆ. ನಮ್ಮ ಪರಿಷತ್ಗೆ ನೂರು ಕೋಟಿ ಹಣವನ್ನು ಸಿದ್ದರಾಮಯ್ಯರು ನೀಡಿದ್ದಾರೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಐ.ಬಿ.ಚಾರಶೆಟ್ಟಿ, ಹಿರಿಯ ನ್ಯಾಯವಾದಿ ಎನ್.ಎಮ್. ಸುತಾರ ವೇದಿಕೆಯಲ್ಲಿ ಇದ್ದರು. ಎಸ್.ಎಚ್.ಚಟ್ಟರಕಿ ಸ್ವಾಗತಿಸಿದರು. ಕಾರ್ಯದರ್ಶಿ ಎ.ಎಚ್.ಜೈನಾಪುರ, ನಾಗರಾಜ ಲಂಬು, ಜಿ.ಎಸ್.ಪವಾರ, ಡಿ.ಜಿ.ಬಿರಾದಾರ, ತಿಪ್ಪಣ್ಣ ದೊಡ್ಡಮನಿ, ಕೆ.ಎಂ.ಕೂಡಲಗಿ, ಜಾಫರ್ ಅಂಗಡಿ, ಎಸ್.ಎಸ್.ಮೂಡಲಗಿ, ಟಿ.ಡಿ.ಹೊಂಬಾಶೆ, ಮುನ್ನಾ ಬಿಜಾಪುರ, ಐ.ಜಿ. ಇನಾಮದಾರ ಸೇರಿದಂತೆ ಅನೇಕರಿದ್ದರು.