ವಿಜಯಪುರ: ಕಾಂಗ್ರೆಸ್ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಸೋಮವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲೆಯ ಇಬ್ಬರು ಸಚಿವರು ಹಾಗೂ ಕಾಂಗ್ರೆಸ್ನ ಎಲ್ಲ ಶಾಸಕರು, ನೂರಾರು ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬಿಸಿಲಿದ್ದರೂ ಬತ್ತದ ಉತ್ಸಾಹ!
ತೆರೆದ ವಾಹನ ಏರಿದ ನಾಯಕರುಗಳು, ಭಾಷಣ ಮಾಡುತ್ತಲೇ ಸಾಗಿದ್ದು ವಿಶೇಷವಾಗಿತ್ತು. ಇದಕ್ಕೆ ಕಾರಣ ಬಿಸಿಲೂ ಆಗಿದ್ದರೂ ಅದನ್ನೂ ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿದ್ದ ಜನರು, ಮಹಿಳೆಯರು ದಾರಿಯುದ್ದಕ್ಕೂ ಉತ್ಸಾಹದಿಂದ ಇದ್ದರು. ‘ಈ ಸಲ ಬದಲಿಸಬೇಕು ಬಿಜಾಪುರ’ ಎಂದು ಘೋಷಣೆ ಕೂಗುತ್ತಿದ್ದರು.
ಮನಸೆಳೆದ ಲಂಬಾಣಿ ನೃತ್ಯ
ಹಲಗೆಯ ಸಪ್ಪಳಕ್ಕೆ ಲಂಬಾಣಿ ಮಹಿಳೆಯರು ಆಕರ್ಷಕ ಹೆಜ್ಜೆ ಹಾಕಿದರು. ನಾನಾ ವಾದ್ಯಗಳು ಸಾಥ್ ನೀಡಿದವು. ದಾರಿ ಮಧ್ಯೆ ಜನರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅವರವರ ಪಾಡಿಗೆ ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು ಕುಡಿಯುತ್ತ ಹೆಜ್ಜೆ ಹಾಕುತ್ತಿದ್ದರು. ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಮಾತನಾಡಿ, ಮೋದಿಯವರ ಸುಳ್ಳುಗಳೆಲ್ಲ ಬಹಿರಂಗವಾಗಿವೆ. ಅಚ್ಛೇ ದಿನಗಳು ಎಂದು ಹೇಳಿ ಅಧಿಕಾರ ಹಿಡಿದವರು ಕೆಟ್ಟ ದಿನಗಳನ್ನು ಕೊಟ್ಟರು. ನೋಟ್ ಬಂದಿ, ಬೆಲೆ ಏರಿಕೆ, ಜಿಎಸ್ಟಿಯಿಂದ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಕಾಂಗ್ರೆಸ್ ದೇಶವನ್ನು ಕಟ್ಟಿದ ಪಕ್ಷ. ಸ್ವಾತಂತ್ರ್ಯ ಬಂದ ನಂತರ ಸೂಜಿಯೂ ತಯಾರಾಗದ ಸ್ಥಿತಿಯಲ್ಲಿದ್ದ ಭಾರತವನ್ನು ಉಜ್ವಲಗೊಳಿಸಿದ್ದು ಕಾಂಗ್ರೆಸ್. ಇಲ್ಲಿನ ನೀರಾವರಿ ಯೋಜನೆಗಳು, ಗ್ಯಾರಂಟಿ ಫಲಪ್ರದವಾದ ವಿಷಯಗಳನ್ನು ಗಮನಿಸಿ ಮತದಾರರು ಈ ಬಾರಿ ಆಲಗೂರರನ್ನು ಆರಿಸಿ ಕಳಿಸಬೇಕು ಎಂದು ಹೇಳಿದರು.
ಸಚಿವ ಶಿವಾನಂದ ಪಾಟೀಲ ಅವರು ಮಾತನಾಡಿ, ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಯೋಗ್ಯ ಬೆಲೆ, ಹೆಣ್ಣುಮಕ್ಕಳಿಗೆ ಲಕ್ಷ ರೂ. ನೀಡುವ ಗ್ಯಾರಂಟಿ ಘೋಷಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯರ ಸರಕಾರ ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸಿದೆ. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಬದಲಾವಣೆ ಗಾಳಿ ಬೀಸಿದೆ. ಇವೆರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಪ್ಪಾಜಿ ನಾಡಗೌಡ, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ ಮಾತನಾಡಿದರು.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಮುಖಂಡರಾದ ಹಮೀದ್ ಮುಶ್ರೀಫ್, ಕಾಂಗ್ರೆಸ್ ಜಿಲ್ಲಾಧ್ಕಕ್ಷ ಎಂ.ಎಸ್. ಲೋಣಿ, ಸಂಗಮೇಶ ಬಬಲೇಶ್ವರ, ಡಾ. ಮಕ್ಬೂಲ್ ಬಾಗವಾನ, ಡಾ.ಗಂಗಾಧರ ಸಂಬಣ್ಣಿ, ಆಜಾದ್ ಪಟೇಲ, ಟಪಾಲ್ ಎಂಜಿನಿಯರ್, ಷಹಜಹಾನ್ ಮುಲ್ಲಾ, ಅಲ್ತಾಫ್ ಖಾದ್ರಿ, ಚಾಂದಸಾಬ್ ಗಡಗಲಾವ, ವಸಂತ ಹೊನಮೋಡೆ, ಹೊನಮಲ್ಲ ಸಾರವಾಡ, ಜಮೀರ ಭಕ್ಷಿ ಅನೇಕರಿದ್ದರು.