ವಿಜಯಪುರ: ತಮ್ಮ ಸರಳತೆ, ಸಜ್ಜನಿಕೆಯಿಂದಲೇ ಮತದಾರರ ಮನಸ್ಸು ಗೆಲ್ಲುತ್ತಿರುವ ಕಾಂಗ್ರೆಸ್ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಗುರುವಾರ ಬೆಳಗ್ಗೆ ಸಾಮಾನ್ಯರ ಜತೆಗೇ ಕುಳಿತು ಉಪಹಾರ ಸೇವಿಸಿದ್ದು ವಿಶೇಷವಾಗಿತ್ತು. ಹೀಗೆ ಜನ ಸಾಮಾನ್ಯರ ಜತೆ ಪ್ರಚಾರಕ್ಕೂ ಮುನ್ನ ನಗರದ ಸೊಲ್ಲಾಪುರ ರಸ್ತೆಯ Blde ಆವರಣದ ಮುಂದಿನ ಕ್ಯಾಂಟೀನ್ವೊಂದರಲ್ಲಿ ಚಹಾ ಕುಡಿಯುತ್ತ ಚರ್ಚಿಸುತ್ತಿದ್ದಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕರೆ ಬಂದಿದ್ದು ಮತ್ತೂ ವಿಶೇಷವಾಗಿತ್ತು. ಖರ್ಗೆಯವರು ಚುನಾವಣೆ ಕುರಿತು ಮಾಹಿತಿ ಪಡೆದು, ಹೇಗೆ ನಡೆಯುತ್ತಿದೆ ಪ್ರಚಾರ? ನಿಮ್ಮ ಬಗ್ಗೆ ಹೈಕಾಮಂಡ್ಗೆ ಒಳ್ಳೆಯ ವರದಿ ಬಂದಿದೆ.
ನೀವು ಗೆಲ್ಲುವ ಅಭ್ಯರ್ಥಿಯಾಗಿದ್ದೀರಿ. ಎಲ್ಲರ ಸಹಕಾರ ಪಡೆಯಿರಿ ಎಂದು ಹೇಳಿದರು. ಹೋಟೆಲ್ವೊಂದರಲ್ಲಿ ಇರುವುದಾಗಿ ಹೇಳಿದ ಆಲಗೂರರು, ಜಿಲ್ಲೆಯ ಎಲ್ಲ ಪ್ರಮುಖ ನಾಯಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಎಲ್ಲರೂ ಒಮ್ಮತ ಹಾಗೂ ಉತ್ಸಾಹದಿಂದ ಬೆನ್ನಿಗಿದ್ದು ಪಕ್ಷದ ಗೆಲುವಿಗಾಗಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಕೆಳ ಹಂತದಿಂದ ಮತದಾರರನ್ನು ತಲುಪುತ್ತಿದ್ದೇವೆ ಎಂದು ವಿವರಿಸಿದರು.
ಖರ್ಗೆಯವರು ಇದಕ್ಕುತ್ತರಿಸಿ, ‘ನೀವು ಗೆದ್ದೇ ಗೆಲ್ಲುತ್ತೀರಿ. ಇದೇ ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕು’ ಎಂದು ಹೇಳಿ ಹಲವು ಸೂಚನೆ, ಸಲಹೆಗಳನ್ನು ಕೊಟ್ಟರು.
ಉಪಹಾರ ಮಾಡುತ್ತ ಆಲಗೂರರು ಹೋಟೆಲ್ಲಿಗೆ ಬಂದವರ ಜೊತೆಗೆ ಮಾತನಾಡುತ್ತ ರಾಜಕಾರಣ ಹೊರತುಪಡಿಸಿ ಅವರ ಕುಷಲೋಪರಿ ವಿಚಾರಿಸುತ್ತಿದ್ದರು. ದೇಶದ ಇಂದಿನ ಸ್ಥಿತಿ, ಬೆಲೆ ಏರಿಕೆ ಬಗ್ಗೆಯೂ ಹಲವರು ಮಾತನಾಡಿದರು. ‘ನೀವು ಹೀಗೆ ಎಲ್ಲರೊಂದಿಗೆ ಬೆರೆಯುತ್ತೀರಿ. ಸದ್ಯದ ಸಂಸದರು ನಮಗೆ ಮುಖವನ್ನೇ ತೋರಿಸಿಲ್ಲ. ಈಗ ಚುನಾವಣೆ ಬಂದಾಗ ಅವರ ಮುಖ ನೋಡುತ್ತಿದ್ದೇವೆ. ನಿಮ್ಮಂತಹವರು ಜನಪ್ರತಿನಿಧಿಗಳಾದರೆ ಉತ್ತಮ ಎಂದರು.
ನೀವು ಆಯ್ಕೆಯಾದರೆ ನಗರಕ್ಕೆ ರೈಲು, ವಿಮಾನಯಾನ, ಪ್ರವಾಸಿ ತಾಣವಾಗಿ ಅಭಿವೃದ್ಧಿ, ಮೂಲ ಸೌಕರ್ಯಗಳಂತಹ ಮಹತ್ವದ ಕೆಲಸ ಮಾಡಬೇಕು ಎಂದು ತಮ್ಮ ಪಟ್ಟಿ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಆಲಗೂರ್, ಈಗಾಗಲೇ ಎರಡು ಬಾರಿ ಶಾಸಕನಾಗಿ, ನಿಗಮದ ಅಧ್ಯಕ್ಷನಾಗಿ ದುಡಿದಿದ್ದೇನೆ. ನೀವು ಈ ಬಾರಿ ವಿಶ್ವಾಸವಿಟ್ಟು ಮತ ಹಾಕಿದರೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಪುತ್ರ ಬಸವನಗೌಡ ಪಾಟೀಲ ಮತ್ತು ಡಾ.ಮಹಾಂತೇಶ ಬಿರಾದಾರ ಆಲಗೂರರಿಗೆ ಸಾಥ್ ನೀಡಿದರು.
ಗೃಹಲಕ್ಷ್ಮಿ ರೊಕ್ಕ ಬಂದು ನಮ್ಮಂತೋರಿಗಿ ಪಾಡಾಗ್ಯಾದ್ರಿ:
ರಾಜು ಆಲಗೂರ ಅವರು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಕಷ್ಟ-ಸುಖವನ್ನೂ ಕೇಳಿ ಆಪ್ತತೆ ಮೆರೆದರು. ಅಡುಗೆ ಕೋಣೆಗೆ ಹೋಗಿ ಹೆಣ್ಣುಮಕ್ಕಳನ್ನು ಮಾತನಾಡಿಸಿದರು. ಅಲ್ಲಿದ್ದವರು, ‘ನಮಗ ಸಿದ್ದರಾಮಯ್ಯರು ತಿಂಗ್ಳಾ ಎರಡು ಸಾವಿರ ಹಾಕ್ತಿರೋದು, ಬಸ್ ಫ್ರೀ, ಕರೇಂಟ್ ಕೊಟ್ಟಿರೋದಕ್ಕ ಭಾಳ ಅನುಕೂಲ ಆಗ್ಯಾದ್ರಿ.. ನಮ್ಮ ಮಕ್ಕಳು ನಾವೀಗ ನೆಮ್ಮದಿಯಿಂದ ಇದ್ದೀವಿ. ಎಂ.ಬಿ.ಪಾಟೀಲರು ನಮಗ ನೀರ್ ಕೊಟ್ಟು ಭಾಳ ದೊಡ್ಡ ಉಪಗಾರ ಮಾಡ್ಯಾರ್ರೀ ಸರ್..’ ಎಂದು ಭಾವುಕರಾದರು. ಅಲ್ಲಿದ್ದ ಅನೇಕರು ಕೂಡ ‘ನೀರಾವರಿ ಕೆಲಸಗಳನ್ನು ಶ್ಲಾಘಿಸಿದರು. ‘ಹಿಂದೆ ಬಿಜಾಪುರಕ್ಕ ಗಿಂಗಳಿಗೊಮ್ನೆ ನೀರ್ ಬರ್ತಿದ್ವು ಈಗ ಆರಾಮಿದೀವ್ರಿ.. ನಮ್ಮ ಹೊಲಾನೂ ಛೊಲೊ ಬೆಳಿಲಿಕತ್ತಾವ ಭೂಮೀಗಿ ಬಂಗಾರದ ಬೆಲಿ ಬಂದಾದ’ ಎಂದು ಹೇಳಿದ್ದು ಕೇಳಿದ ಆಲಗೂರರಿಗೆ ಸಮಾಧಾನ ತಂದಿತು. ಮುಂದೆಯೂ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿ, ಮೌನವಾಗಿ ನಮಸ್ಕರಿಸಿ ಮುನ್ನೆಡೆದರು.