ವಿಜಯಪುರ: ಸಾಮಾನ್ಯ ಜನರ ‘ಅಚ್ಛೇ ದಿನ್’ ಭಾರತದಲ್ಲಿವೆ, ಆದರೆ ಕಾಂಗ್ರೆಸ್ ಗೆ ಅಲ್ಲ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ವಿಜಯಪುರದಲ್ಲಿ ಶನಿವಾರ ಬಿಜೆಪಿ ಸರ್ಕಾರದ ಕಲ್ಯಾಣ ಯೋಜನೆಯ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ನಂತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಕ್ಷವು ತನ್ನ ‘ಮುಕ್ತಾಯದ ದಿನಾಂಕ’ ದಾಟಿರುವುದರಿಂದ ಕಾಂಗ್ರೆಸ್ ಗೆ ಅಚ್ಛೇ ದಿನ್ ಬರುವುದಿಲ್ಲ ಎಂದು ಹೇಳಿದರು.
“ಬಿಜೆಪಿ ಆಡಳಿತದ ಅವಧಿಯಲ್ಲಿ, ಸಾಮಾನ್ಯ ಜನರ ಅಚ್ಛೇ ದಿನ್ ಬಂದಿದೆ ಆದರೆ ಖಂಡಿತವಾಗಿಯೂ ಕಾಂಗ್ರೆಸ್ ಗೆ ಬಂದಿಲ್ಲ”. ಸಾಮಾನ್ಯ ಜನರನ್ನು ಮುಖ್ಯವಾಗಿ ಬಡವರು ಮತ್ತು ತುಳಿತಕ್ಕೊಳಗಾದ ವರ್ಗವನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ. ಪ್ರಯೋಜನಗಳು ದೇಶದ ಪ್ರತಿಯೊಂದು ಮನೆಗೂ ತಲುಪಿವೆ ಎಂದು ಜೋಶಿ ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ 11.45 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ .2026 ರ ವೇಳೆಗೆ ಭಾರತದ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ನೀಡುವ ಗುರಿಯನ್ನು ನಮ್ಮ ಸರ್ಕಾರ ನಿಗದಿಪಡಿಸಿದೆ. 2024 ರ ಚುನಾವಣೆಯ ನಂತರವೂ ಮೋದಿ ಪ್ರಧಾನಿಯಾಗುತ್ತಾರೆ ಮತ್ತು ದೇಶದ ಪ್ರತಿ ಮನೆಗೂ ನಲ್ಲಿ ನೀರು ನೀಡುವ ಗುರಿಯನ್ನು ನಾವು ಸಾಧಿಸುತ್ತೇವೆ ಎಂದು ಅವರು ಹೇಳಿದರು.
ವಿಜಯಪುರ ಒಂದರಲ್ಲೇ ಜಿಲ್ಲೆಯ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು 4,000 ಕೋಟಿ ರೂ.ಅನುದಾನ ವನ್ನು ನೀಡಿದೆ.ಜಿಲ್ಲೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಉಲ್ಲೇಖಿಸಿದ ಜೋಶಿ, ಈ ವರ್ಷದ ಮೇ ವೇಳೆಗೆ ಯೋಜನೆಯ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಕೃಷಿ ಸಾಲ ಮನ್ನಾದ ಬೇಡಿಕೆಗೆ ಸಂಬಂಧಿಸಿದಂತೆ, ಸಾಲ ಮನ್ನಾ ಮಾಡುವ ಬದಲು, ಬಿಜೆಪಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಣವನ್ನು ಜಮಾ ಮಾಡುತ್ತಿದೆ ಎಂದು ಅವರು ಹೇಳಿದರು.
ಶಾಸಕರಾದ ಸೋಮನಗೌಡ ಪಾಟೀಲ್ ಸಾಸನೂರು, ರಮೇಶ್ ಭೂಸನೂರ, ಬಸನಗೌಡ ಪಾಟೀಲ್ ಯತ್ನಾಳ್, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಮತ್ತಿತರರು ಉಪಸ್ಥಿತರಿದ್ದರು.