ವಿಜಯಪುರ: ಬಿಜೆಪಿಯವರು ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಅಂತ ಹೇಳಿ, ಸಬ್ ಕಾ ಸತ್ಯಾನಾಶ ಮಾಡುತ್ತಿದ್ದಾರೆ ಎಂದು ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಇಂದು ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಸಬ್ ಕಾ ಸಾಥ್ ಸಬ್ ವಿಕಾಸ್ ಎಂದು ಹೇಳಿ ಸಬ್ ಕಾ ಸತ್ಯಾನಾಶ ಮಾಡಿದ್ದಾರೆ. ಅಶೋಕ ಮನಗೂಳಿ ಅವರನ್ನು ಗೆಲ್ಲಿಸಿದರೆ ಪ್ರಧಾನಿ ಮೋದಿಯವರಿಗೆ ಎಚ್ಚರಿಕೆ ಗಂಟೆಯಾಗುತ್ತದೆ ಎಂದರು.
ಪಕ್ಷದ ದೃಷ್ಟಿಯಿಂದ ಹಾಗೂ ದೇಶದ ದೃಷ್ಟಿಯಿಂದ ಈ ಚುನಾವಣೆ ಮಹತ್ವದ್ದಾಗಿದೆ. ರಾಜ್ಯದಲ್ಲಿ ಇವತ್ತು ಅನಧಿಕೃತ ಸರ್ಕಾರ ಇದೆ. ರಾಜ್ಯದಲ್ಲಿ ಈ ಸರ್ಕಾರಕ್ಕೆ ಬಹುಮತ ಕೊಡದಿದ್ದರು, ನಮ್ಮ ಪಕ್ಷದಿಂದ ಒಡೆಸಿ ಹಣದ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ.
ಇನ್ ಕಮ್ ಟ್ಯಾಕ್ಸ್, ಈಡಿಯಿಂದ ನಮ್ಮ ಪಕ್ಷದವರನ್ನು ಹೆದರಿಸಿ, ತಮ್ಮ ಪಕ್ಷಕ್ಕೆ ಕರೆದುಕೊಂಡು ಸರ್ಕಾರ ರಚಿಸಿದ್ದಾರೆ ಎಂದು ದೂರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ, ಯಶವಂತರಾಯಗೌಡ ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಇದ್ದರು.