ವಿಜಯಪುರ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಸಿಂದಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲೆಯ ಸಿಂದಗಿ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ, ಉಪ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರಚುನಾವಣೆ ಪ್ರಚಾರ ನಡೆಸಿ ಅವರು ಮಾತನಾಡಿದರು.
ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರಿಗೆ ಮತದಾರರು ಆಶೀರ್ವದಿಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ಶತ್ರು ರಾಷ್ಟ್ರಗಳ ಹುಟ್ಟಡಗಿಸಲು ಪ್ರಧಾನಿ ಮೋದಿ, ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್ ಮಾಡಿ, ದಿಟ್ಟತನವನ್ನು ತೋರಿದ್ದಾರೆ. ಇಂದು ದೇಶ ಸುರಕ್ಷತೆಯಲ್ಲಿದೆ, ನೀವು ಕೆಣಕಿದರೆ ನಾವು ಬಿಡುವುದಿಲ್ಲ ಎನ್ನುವ ಸಂದೇಶವನ್ನು ಪ್ರಧಾನಿ ಮೋದಿಯವರು ರವಾನಿಸಿದ್ದಾರೆ ಎಂದರು.
ಅಲ್ಲದೆ ಕೇಂದ್ರ ಸರ್ಕಾರ ಅನ್ನದಾತರ ಆರ್ಥಿಕ ನೆರವಿಗಾಗಿ ಫಸಲ್ ಬೀಮಾ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೆಣ್ಣು ಮಕ್ಕಳ ಪೋಷಣೆಗೆ ಮುಂದಾಗಿದೆ.
ಇವುಗಳೊಂದಿಗೆ ಹತ್ತಾರು ಯೋಜನೆಗಳಾ ಸುಕನ್ಯಾ ಸಮೃದ್ಧಿ ಯೋಜನೆ, ಸ್ವಚ್ಛ ಭಾರತ, ಮುದ್ರಾ ಯೋಜನೆ, ಪ್ರಧಾನಮಂತ್ರಿ ಜನಧನ ಸೇರಿದಂತೆ ಅಟಲ್ ಪಿಂಚಣಿ ಯೋಜನೆಗಳಂತಹ ಜನಪರ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಣೆ ಶ್ರಮಿಸುತ್ತಿದೆ.
ಇದರೊಂದಿಗೆ ರಾಜ್ಯ ಬಿಜೆಪಿ ಸರ್ಕಾರವೂ ರೈತರ ಮಕ್ಕಳಿಗೆ ಶಿಷ್ಯವೇತನ ಎಂದು ನೂತನವಾಗಿ ಯೋಜನೆ ಜಾರಿಗೊಳಿಸಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಭಾಗ್ಯ ಲಕ್ಷ್ಮೀ ಯೋಜನೆ, ಉಚಿತ ಸೈಕಲ್ ವಿತರಣೆಗಳಂತಹ ಹಲವಾರು ಯೋಜನೆಗಳನ್ನು ಜಾರಿ ಮಾಡಿ, ಜನಮುಖಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಇಂತಹ ಪಕ್ಷದ ಅಭ್ಯರ್ಥಿಯಾದ ರಮೇಶ ಭೂಸನೂರ ಅವರಿಗೆ ತಮ್ಮ ಮತವನ್ನು ನೀಡುವ ಮೂಲಕ ಜನಪರ ಕಾರ್ಯಗಳನ್ನು ಬೆಂಬಲಿಸಬೇಕು ಎಂದರು. ಈ ಸಂದರ್ಭ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪತ್ನಿ ಲಲಿತಾ ಭೂಸನೂರ, ಶಿಲ್ಪಾ ಕುದರಗೊಂಡ ಮತ್ತಿತರರು ಇದ್ದರು.