ವಿಜಯಪುರ: ಸಿಂದಗಿ ಉಪ ಚುನಾವಣೆಯಲ್ಲಿ 20 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ಲಾನ್ ಹಾಕಿಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಜಿಲ್ಲೆಯ ಸಿಂದಗಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಭೂಸನೂರ ಅವರು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣಾ ಪ್ರಚಾರಕ್ಕೆ 7 ತಂಡಗಳನ್ನು ರೆಡಿ ಮಾಡಲಾಗಿದೆ. ನಿರೀಕ್ಷೆಗಿಂತ ಹೆಚ್ಚಿನ ಮತಗಳು ಬಿಜೆಪಿಗೆ ಬರಲಿವೆ ಎಂದರು.
ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಕರ್ತರ ಎರೆಡು ಸುತ್ತಿನ ಸಭೆ ನಡೆದಿದೆ. ಈ ಹಿಂದೆ ಸತತ ಮೂರು ಬಾರಿ ಬಿಜೆಪಿ ಗೆದ್ದಿದೆ, ಆದರೆ ಕಳೆದ ಬಾರಿ ಕ್ಷೇತ್ರ ಕಳೆದುಕೊಳ್ಳುವಂತಾಯಿತು ಎಂದರು.
ಪ್ರಸ್ತುತ ಉಪ ಚುನಾವಣೆಗೆ ಮನೆ-ಮನೆ ಬೂತ್ ಮಟ್ಟದಲ್ಲಿ ಚುನಾವಣೆಯ ತಂಡಗಳು ರೆಡಿಯಾಗಿವೆ. ವಿ. ಸೋಮಣ್ಣ, ಶಶಿಕಲಾ ಜೊಲ್ಲೆ, ಸಿ.ಸಿ. ಪಾಟೀಲ ಚುನಾವಣೆ ಮುಗಿಯುವವರೆಗೂ ಇಲ್ಲೆ ಇರುತ್ತಾರೆ ಎಂದರು.
ಅಲ್ಲದೆ ಮುಖ್ಯಮಂತ್ರಿಗಳು ಕೂಡ ಪ್ರಚಾರಕ್ಕೆ ಬರಲಿದ್ದಾರೆ. ಎರೆಡು ದಿನಗಳ ವರೆಗೆ ಯಡಿಯೂರಪ್ಪನವರು ಪ್ರಚಾರಕ್ಕೆ ಬರಲಿದ್ದಾರೆ ಎಂದರು.
ಅಭ್ಯರ್ಥಿ ಆಯ್ಕೆಗೆ ತಡವಾದ ವಿಚಾರ ಕುರಿತು ಪ್ರತಿಕ್ರಿಯಿಸಿ, ಮೊದಲೇ ಅಭ್ಯರ್ಥಿ ಪಟ್ಟಿ ಕಳುಹಿಸಿದ್ದೇವು. ಉತ್ತರ ಭಾರತದಲ್ಲಿ ನವರಾತ್ರಿ ಹಿನ್ನೆಲೆ. ಅಮಾವಾಸ್ಯೆ ಕಳೆದ ಮೇಲೆ ಅಭ್ಯರ್ಥಿ ಹೆಸರು ಪ್ರಕಟಿಸಲಾಗಿದೆ ಎಂದರು. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಕೆ.ಎಸ್. ಈಶ್ವರಪ್ಪ, ವಿ.ಸೋಮಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು