ಬೆಳಗಾವಿ: ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಮ್ ಇಎಸ್) ಪ್ರತಿವರ್ಷ ರಾಜ್ಯೋತ್ಸವದಂದು ವಿರೋಧದ ನಡುವೆಯೂ ಕರಾಳ ದಿನಾಚರಣೆ ಆಚರಿಸುತ್ತ ಬರುತ್ತಿದೆ.
ಅದರಂತೆ ಈ ವರ್ಷವೂ ನ.1 ರಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ಎಂಇಎಸ್ ಸಿದ್ಧತೆ ನಡೆಸುತ್ತಿದೆ. ಈ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನೆವೆಂಬರ್ 1ರಂದು ಎಂಇಎಸ್ನ ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಪ್ರತಿನಿಧಿ ಕಳಿಸುವುದಾಗಿ ಸಿಎಂ ಶಿಂಧೆ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಕರಾಳ ದಿನಾಚರಣೆ ಮಾಡದಂತೆ ಎಂಇಎಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದರು. ಕರಾಳ ದಿನಾಚರಣಗೆ ಅನುಮತಿ ನೀಡಿಲ್ಲ. ಅಷ್ಟೂ ಮೀರಿ ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮಕೈಗೊಳ್ಳುವುದಾಗಿ ಖಡಕ್ ಸಂದೇಶ ರವಾನಿಸಿದ್ದರು. ಅಲ್ಲದೇ ಮಹಾರಾಷ್ಟ್ರ ನಾಯಕರಿಗೂ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧಿಸುವುದಾಗಿ ಹೇಳಿದ್ದರು.