ಹಾವೇರಿ, ಜೂ.1: ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಸಿನಿಮಾ ಹಾಲ್ ಒಂದರಲ್ಲಿ ನಡೆದ ಶೂಟೌಟ್ ಪ್ರಕರಣ ಸಂಬಂಧ ದುಷ್ಕರ್ಮಿಗೆ ಬಂದೂಕು ಸರಬರಾಜು ಮಾಡಿದ ಮೂವರು ಆರೋಪಿಗಳನ್ನು ಬಿಹಾರದಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಗುಂಡೇಟು ತಿಂದ ವಸಂತ ಕುಮಾರ ಮುಗಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಗ್ಗಾವ್ನ ಸಿನಿಮಾ ಹಾಲ್ ಒಂದರಲ್ಲಿ ಏಪ್ರಿಲ್ 20ರಂದು ವಸಂತ ಕುಮಾರ ಮುಗಳಿ ಕೆಜಿಎಫ್-2 ಸಿನಿಮಾ ವೀಕ್ಷಿಸುತ್ತಿದ್ದರು. ಈ ವೇಳೆ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದ.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಗುಂಡು ಹಾರಿಸಿದ ಪ್ರಮುಖ ಆರೋಪಿ ಮಂಜುನಾಥ್ ಪಾಟೀಲ್ ನನ್ನು ಬಂಧಿಸಿದ್ದರು. ನಂತರ ಈತನಿಗೆ ಬಂದೂಕು ಸರಬರಾಜು ಮಾಡಿದ ಆರೋಪಿಗಳ ಜಾಡು ಹಿಡಿದು ಹೊರಟ ಹಾವೇರಿ ಪೊಲೀಸರು, ಬಿಹಾರದ ಮುಂಗೇರ್ ಜಿಲ್ಲೆಯ ಬರ್ಹಾದ್ ಗ್ರಾಮದಲ್ಲಿ ನೆಲೆಸಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಹಾವೇರಿಗೆ ಕರತಂದಿದ್ದಾರೆ.
ಏಪ್ರಿಲ್ 20ರಂದು ಜಿಎಫ್-2 ಸಿನಿಮಾ ವೀಕ್ಷಿಸಲು ಶಿಗ್ಗಾವಿಯ ಸಿನಿಮಾ ಹಾಲ್ ಒಂದಕ್ಕೆ ವಸಂತ ಕುಮಾರ ಮುಗಳಿ ಹೋಗಿದ್ದಾರೆ. ಅದೇ ಸಿನಿಮಾ ಹಾಲ್ ನಲ್ಲಿ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಆರೋಪಿ ಮಂಜುನಾಥ್ ಪಾಟೀಲ್ ಕಾಲನ್ನು ಮುಂದಿನ ಚೇರ್ ಮೇಲೆ ಚಾಚಿ ಕುಳಿತ್ತಿದ್ದಾನೆ. ‘ಸಿನಿಮಾ ನೋಡಲು ತೊಂದರೆಯಾಗುತ್ತದೆ. ಕಾಲನ್ನು ಹಿಂದಕ್ಕೆ ತೆಗೆದು ಸರಿಯಾಗಿ ಕುಳಿತುಕೊಳ್ಳಿ’ ಎಂದು ವಸಂತ ಕುಮಾರ ಮುಗಳಿ, ಮಂಜುನಾಥ್ ಪಾಟೀಲ್ಗೆ ಮನವಿ ಮಾಡಿದ್ದಾರೆ. ಆದರೆ ಈ ವಿಷಯವಾಗಿ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೆ ಹೋಗಿದೆ. ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಮಂಜುನಾಥ್ ಪಾಟೀಲ್ ತನ್ನ ಬಳಿಯಿದ್ದ ಬಂದೂಕಿನಿಂದ ವಸಂತ ಕುಮಾರ ಮುಗಳಿ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಶಿಗ್ಗಾವಿ ಪೊಲೀಸರು, ಆರೋಪಿಗಾಗಿ ಎಲ್ಲೆಡೆ ಶೋಧ ನಡೆಸಿದ್ದಾರೆ. ನಂತರ ಮೇ 19ರಂದು ಆರೋಪಿ ಮಂಜುನಾಥ್ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತನಿಂದ ಒಂದು ಬಂದೂಕು, 15 ಜೀವಂತ ಗುಂಡುಗಳು, ಒಂದು ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆತನ ಸಹಚರ ಇಸ್ಮಾಯಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
“ಶಿಗ್ಗಾವಿ ಥಿಯೇಟರ್ ನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದೂಕು ಸರಬರಾಜು ಮಾಡಿದ ಆರೋಪದ ಮೇರೆಗೆ ಬಿಹಾರದ ಮುಂಗೇರ್ ಜಿಲ್ಲೆಯ ಬರ್ಹಾದ್ ಗ್ರಾಮದ ಮೂವರು ಆರೋಪಿಗಳನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ,” ಎಂದು ಹಾವೇರಿ ಎಸ್ಪಿ ಟ್ವೀಟ್ ಮಾಡಿದ್ದಾರೆ.