ಹಾವೇರಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಥಿಯೇಟರ್ ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಸಂಬಂಧ ಪೊಲೀಸರು ಬಿಹಾರದ ಮೂಲದ ಮೂವರನ್ನು ಬಂಧಿಸಿದ್ದಾರೆ.
ಶಿಗ್ಗಾಂವಿಯ ಥಿಯೇಟರ್ ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಅಲಿಯಾಸ್ ಮಲ್ಲಿಕ್ ಪಾಟೀಲ್ ನನ್ನು ಬಂಧಿಸಿದ್ದಾರೆ. ಇದೀಗ ಮಲ್ಲಿಕ್ ಪಾಟೀಲ್ ಗೆ ಪಿಸ್ತೂಲ್, ಗುಂಡು ತಯಾರಿಸಿಕೊಟ್ಟಿದ್ದ ಬಿಹಾರ ಮೂಲದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಹಾರದ ಮುಂಗೇರ್ ಜಿಲ್ಲೆಯ ಮಿರ್ಜಾಪುರದ ಬರದಾದಲ್ಲಿ ಪೊಲೀಸರು ಮೊಹಮ್ಮದ್ ಸಮ್ಸದ್, ಮೊಹಮ್ಮದ್ ಅಲಾಮ್, ಮೊಹಮ್ಮದ್ ಸಾಹೀದ್ ಚಾಂದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯ ಸಿಪಿಐ ಬಸವರಾಜ ತಂಡದಿಂದ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಏಪ್ರಿಲ್ 19 ರಂದು ರಾಜಶ್ರೀ ಥಿಯೇಟರ್ ನಲ್ಲಿ ಕೆಜಿಎಫ್ 2 ಚಿತ್ರ ಪ್ರದರ್ಶನ ವೇಳೆ ಪಾಟೀಲ್ ವಸಂತ ಕುಮಾರ್ ಮುಗಳಿ ಮೇಲೆ ಗುಂಡು ಹಾರಿಸಿದ್ದ. ಗಾಯಾಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾನೆ. ಗುಂಡಿನ ದಾಳಿ ನಂತರ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ, ನಂತರ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು