ಗದಗ : ರಾಜ್ಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಕೋವಿಡ್ ಸೋಂಕಿನ ತೀವ್ರತೆಗೂ ಮುನ್ನಾ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೆಲಸಕ್ಕೆ ಗೈರುಹಾಜರಿಯ ನೆಪ ನೀಡಿ ಸಾವಿರಾರೂ ಮುಷ್ಕರ ನಿರತರ ನೌಕರರನ್ನು ನಾಲ್ಕು ನಿಗಮದಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು.
ಇದೀಗ ನಾಲ್ಕು ವಾರಗಳಲ್ಲಿ ವಜಾಗೊಳಿಸಲಾಗಿರುವಂತ ನೌಕರರನ್ನು ಮರುನೇಮಕ ಮಾಡಿಕೊಳ್ಳುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದಾರೆ.
ಈ ಸಂಬಂಧ ಇಂದು ನಗರದಲ್ಲಿ ಮಾತನಾಡಿದಂತ ಅವರು, ಮುಷ್ಕರದ ಸಂದರ್ಭದಲ್ಲಿ ವಜಾಗೊಳಿಸಲಾಗಿದ್ದಂತ ಸಾರಿಗೆ ನೌಕರರನ್ನು ಮರು ನೇಮಕದ ಬಗ್ಗೆ ಸೂಚಿಸಲಾಗಿದೆ. ನಾಲ್ಕು ನಿಗಮದ ಎಂಡಿಗಳಿಗೆ ಈಗಾಗಲೇ ಮರು ನೇಮಕಾತಿಗಾಗಿ ತಿಳಿಸಲಾಗಿದೆ. ನಾಲ್ಕು ವಾರದೊಳಗೆ ವಜಾಗೊಳಿಸಲಾಗಿದ್ದಂತ ನೌಕರರನ್ನು ಮರು ನೇಮಕ ಮಾಡಿಕೊಳ್ಳುವಂತೆ ಖಡಕ್ ಸೂಚನೆಯನ್ನು ಮತ್ತೆ ನೀಡಿರೋದಾಗಿ ತಿಳಿಸಿದರು.
ಅಂದಹಾಗೇ ಸಾರಿಗೆ ನೌಕರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅನೇಕ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ನಿರತರಾಗಿದ್ದರು. ಮುಷ್ಕರ ನಿರತರನ್ನು ಕೆಲಸಕ್ಕೆ ಮರಳಿಸೋ ಸಂಬಂಧ ಎಚ್ಚರಿಕೆ ನೋಟಿಸ್ ಕೂಡ ನೀಡಲಾಗಿತ್ತು. ಇದಕ್ಕೂ ಜಗ್ಗದೇ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ನಿರತ ನೌಕರರನ್ನು ಕೆಲಸಕ್ಕೆ ಗೈರು ನೆಪವೊಡ್ಡಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಈಗ ಸಾರಿಗೆ ಸಚಿವರು ನಾಲ್ಕು ವಾರದೊಳಗೆ ಈ ನೌಕರರನ್ನು ಮರುನೇಮಕ ಮಾಡಿಕೊಳ್ಳುವಂತೆ ಸೂಚಿಸಿ, ವಜಾಗೊಂಡಿದ್ದಂತ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.