ಗದಗ: ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ೧೦ ಪರ್ಸೆಂಟ್ ಸರ್ಕಾರ ಎಂದು ನಾವು ಆರೋಪ ಮಾಡಿದ್ದೆವು ಈಗ ಅವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್ನವರು ಸತ್ಯ ಹರಿಶ್ಚಂದ್ರ ಎಂದು ತೋರಿಸಿಕೊಳ್ಳಲು ಮುಂದಾಗಿದ್ದಾರೆ. ದಾಖಲಾತಿಗಳಿದ್ದರೆ ಜನರಿಗೆ ತೋರಿಸುವ ಕೆಲಸ ಮಾಡಿ ಎಂದು ಸಚಿವ ಬಿ.ಶ್ರೀರಾಮುಲು ಅವರು ತಿರುಗೇಟು ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಾಜಕಾರಣಕ್ಕಾಗಿ ಕಾಂಗ್ರೆಸ್ ಈ ರೀತಿಯ ಆರೋಪ ಮಾಡುತ್ತಿದೆ. ಕುಂಬಳಕಾಯಿ ಕಳ್ಳ ಅಂದರೆ, ಅವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನವರು ಪ್ರತಿಭಟನಾ ರ್ಯಾಲಿ ಮಾಡುವ ಮೂಲಕ ಯಾಕೆ ನಾಟಕ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಆಧ್ಯತೆ ಕೊಡಬೇಕು, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲು ಅಧಿವೇಶನ ನಡೆಯುತ್ತಿದ್ದು ಅಧಿವೇಶನದಲ್ಲಿ ಚರ್ಚೆಗೆ ನಮ್ಮ ಸರ್ಕಾರ ಸಿದ್ಧವಿದ್ದರೂ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಕೆಲಸ ಮಾಡುತ್ತಿದೆ. ಅವರಿಗೆ ತಾಕತ್ತಿದ್ದರೆ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಸವಾಲ್ ಹಾಕಿದ ಸಚಿವ ಶ್ರೀರಾಮುಲು ಅವರು ಸ್ವಾರ್ಥವನ್ನಿಟ್ಟುಕೊಂಡು ರ್ಯಾಲಿ ಮಾಡಿ, ಜನರ ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದರು.
ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಾಗೂ ಪೌಷ್ಠಿಕ ಆಹಾರ ಹೆಚ್ಚಿಸಲು ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಅದನ್ನು ಬೇಕಾದವರು ಸೇವಿಸಬಹುದು. ಬೇಡವಾದರೆ, ಸಸ್ಯಹಾರವನ್ನು ತಿನ್ನಬಹುದು. ಆಹಾರ ಸೇವನೆ ಅವರವರ ಹವ್ಯಾಸಕ್ಕೆ ಬಿಟ್ಟಿದ್ದು. ಆ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.