ಗದಗ : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಮಗಳಿಗೆ ವಿಷ ಉಣಿಸಿ, ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಅ. 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಯಲ್ಲವ್ವ ಮಹೇಶ ಕಂಗಣ್ಣನವರ (27), ಸಪ್ನಾ (2) ಮೃತರು. ಮಗ ಸಮರ್ಥ (4) ವಿಷ ಕುಡಿಸಲು ಬಂದಾಗ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ.
ಹಲವು ವರ್ಷಗಳಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಚಿಕಿತ್ಸೆಗೆ ಸಾಕಷ್ಟು ಹಣ ಬೇಕಾಗಿತ್ತು. ಪತಿ ಚಾಲಕ ವೃತ್ತಿ ಮಾಡಿಕೊಂಡಿದ್ದು ಬಂದ ಹಣದಲ್ಲಿ ನನಗೆ ಚಿಕಿತ್ಸೆ ಕೊಡಿಸಲು ಆಗುವುದಿಲ್ಲ. ಎದೆ ನೋವಿನಿಂದ ಬದುಕಲು ಸಾಧ್ಯವಿಲ್ಲ. ನಾನು ಸತ್ತರೆ ಮಕ್ಕಳು ಅನಾಥರಾಗುತ್ತಾರೆ ಎಂದು ಯಲ್ಲವ್ವ ಅ. 4ರಂದು ರಾತ್ರಿ 9 ಗಂಟೆಯ ವೇಳೆ ಮಗಳಿಗೆ ವಿಷ ಕುಡಿಸಿ ತಾನು ಕುಡಿದಿದ್ದಾಳೆ. ಪಕ್ಕದಲ್ಲಿಯೇ ಇದ್ದ ಮಗನಿಗೆ ಕುಡಿಸಲು ಮುಂದಾದಾಗ ಅವನು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.
ಈ ವಿಷಯ ಜನರಿಗೆ ತಿಳಿಯುತ್ತಿದ್ದಂತೆ ಯಲ್ಲವ್ವ ಹಾಗೂ ಸಪ್ನಾ ಅವಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಯಲ್ಲವ್ವ ಅಂದೇ ಮೃತಪಟ್ಟರೆ, ಸಪ್ನಾ ಅ. 5ರಂದು ಮೃತಳಾಗಿದ್ದಾಳೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.