ಧಾರವಾಡ: ಐಐಟಿ ಕೇಂದ್ರ ಉದ್ಘಾಟನೆಗಾಗಿ ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡಕ್ಕೆ ಆಗಮಿಸಲಿದ್ದು, ಅವರ ಭದ್ರತೆಗಾಗಿ ಪೊಲೀಸ್ ಸರ್ಪಗಾವಲು ಹೆಣೆಯಲಾಗಿದೆ.
ಐವರು ಎಸ್ಪಿಗಳನ್ನೊಳಗೊಂಡು ಒಟ್ಟು 2 ಸಾವಿರ ಜನ ಪೊಲೀಸರನ್ನು ಕರ್ತವ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಧಾರವಾಡ ಹೊರವಲಯದ ಚಿಕ್ಕಮಲ್ಲಿಗವಾಡ ಬಳಿ ಐಐಟಿ ನೂತನ ಕ್ಯಾಂಪಸ್ ನಿರ್ಮಾಣವಾಗಿದ್ದು, ಇಂದು ಇದನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಪೋಲಿಸ್ ನಿಯೋಜನೆ ವಿವರ
5 ಜನ ಎಸ್ಪಿ, 8 ಜನ ಅಡಿಷನಲ್ ಎಸ್ಪಿ, 28 ಜನ ಡಿವೈಎಸ್ಪಿ, 63 ಜನ ಸಿಪಿಐಗಳು, 125 ಜನ ಪಿಎಸ್ಐಗಳು, 158 ಜನ ಎಎಸ್ಐಗಳು, 1484 ಜನ ಕಾನ್ಸ್ಟೇಬಲ್ಗಳು, 10 ಡಿಆರ್ ತುಕಡಿಗಳು, 15 ಕೆಎಸ್ಆರ್ಪಿ ತುಕಡಿಗಳನ್ನು ಇಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಮೋದಿ ಅವರ ಈ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ. ಐಐಟಿ ಕಟ್ಟಡದ ಮುಂಭಾಗದಲ್ಲೇ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಊಟದ ವ್ಯವಸ್ಥೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, 200ಕ್ಕೂ ಹೆಚ್ಚ ಊಟದ ಕೌಂಟರ್ಗಳನು ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿ ಕ್ಯಾಂಪಸ್ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಅದಕ್ಕಾಗಿ ಐಐಟಿ ಕ್ಯಾಂಪಸ್ ಒಳಗಡೆಯೇ ಮೂರು ಹೆಲಿಪ್ಯಾಡ್ಗಳನ್ನು ನಿರ್ಮಾಣ ಮಾಡಲಾಗಿದೆ.