ಹುಬ್ಬಳ್ಳಿ: ನಗರದಲ್ಲಿ ಗಣೇಶ ಮೂರ್ತಿಗಳ ತಯಾರಿಕೆ ಕೆಲಸ ಭರದಿಂದ ಸಾಗಿದೆ. ನಗರದ ಗೋಪನಕೊಪ್ಪದಲ್ಲಿ ನಡೆಯುವ ಸುಪ್ರಸಿದ್ಧ ಗಣೇಶೋತ್ಸವಕ್ಕೆಂದು ತರಹೇವಾರಿ ಗಣೇಶ ಮೂರ್ತಿಗಳು ಸಿದ್ಧವಾಗುತ್ತಿವೆ. ಅದೇ ಕಾಯದಲ್ಲಿರುವ ಮುಸ್ಲಿಮ್ ಮಹಿಳೆಯೊಬ್ಬರು ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿಘ್ನ ನಾಶಕ ಗಣಪನ ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಮುಸ್ಲೀಮ್ ಧರ್ಮೀಯರಾದ ಸುಮನ್ ಹಾವೇರಿಯವರು ಹಿಂದು ದೇವರ ಮೂರ್ತಿ ತಯಾರಿಸುವಲ್ಲಿ ನೈಪುಣ್ಯತೆ ಗಳಿಸಿಕೊಂಡಿದ್ದಾರೆ. ಸುಮನ್ ಅವರ ಕೈಕುಸುರಿ ಕೆಲಸಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.
ಗೋಪನಕೊಪ್ಪದಲ್ಲಿ ಅರುಣ ಯಾದವ್ ಎಂಬುವವರು ಕಳೆದ ಹದಿನೈದು ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದರು, ಇದೀಗ ಅವರ ಮಗ ಅನೂಪ ಯಾದವ್ ಹಾಗೂ ಅವರ ಪತ್ನಿ ನಿರೂಪಮ ಅವರು ತಯಾರಿಸುತ್ತಿದ್ದಾರೆ. ಸರಕಾರ ಪಿಓಪಿ ಗಣೇಶ ಮೂರ್ತಿಗಳನ್ನು ಬ್ಯಾನ್ ಮಾಡಿದ ನಂತರ ಗುಜರಾತ್ನ ಪೋರಬಂದರ್ನಿಂದ ಮಣ್ಣು ತರಿಸಿ ವಿಶೇಷ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಹೆಚ್ಚಿಗೆ ತೂಕವಾಗದಂತೆ ಹಾಗೂ ಬಿರುಕು ಬಿಡದಂತೆ ಕಾಗದವನ್ನು ಬಳಸಿ ಸುಂದರವಾದ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.
4 ವರ್ಷಗಳ ಹಿಂದೆ ಅರುಣ ಅವರ ಬಳಿ ಸುಮನ್ ಹಾವೇರಿ ಕೆಲಸ ಕೇಳಿಕೊಂಡು ಬಂದಿದ್ದರು. ಗಣೇಶ ಮೂರ್ತಿ ತಯಾರಿಸುವುದನ್ನು ಕಲಿತುಕೊಳ್ಳುವ ಆಸಕ್ತಿ ತೋರಿಸಿದ್ದರು. ಬಡ ಕುಟುಂಬದ ಸುಮನ್ಗೆ ಅರುಣ್ ಯಾದವ್ ಅವರು ಕೆಲಸ ಕೊಟ್ಟಿದ್ದಾರೆ. ಗಣೇಶ ಮೂರ್ತಿಗಳ ತಯಾರಿಕೆ ಕಲಿಸಿಕೊಟ್ಟಿದ್ದಾರೆ. ಮೂರ್ತಿಗಳಿಗೆ ಅಲಂಕಾರ ಮಾಡುವುದು ಮತ್ತು ಫೈನಲ್ ಟಚ್ ಕೊಡುವ ಕೆಲಸವನ್ನು ಸುಮನ್ ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ.
ವಿವಿಧ ಜಾತಿ ಧರ್ಮದ ಜನರು ಸೇರಿಕೊಂಡು ಗಣೇಶನ ವಿಗ್ರಹ ಸಿದ್ಧಪಡಿಸುತ್ತಾರೆ. ಒಂದು ಅಡಿಯಿಂದ ಎಂಟು ಅಡಿಯವರೆಗೆ ಗಣೇಶ ಮೂರ್ತಿಗಳು ಇಲ್ಲಿ ತಯಾರಾಗುತ್ತವೆ. ಗಣೇಶ ಹಬ್ಬದ ಎಂಟು ತಿಂಗಳ ಮೊದಲೇ ಮೂರ್ತಿ ತಯಾರಿಕೆಗೆ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಮೂಷಿಕ ವಾಹನ, ಮೋದಕ ಹಸ್ತನ ಸಿದ್ಧತೆ ಈ ಬಾರಿಯೂ ಭರ್ಜರಿಯಾಗಿ ನಡೆಯುತ್ತಿದೆ.