ಬಾಗಲಕೋಟೆ: ನಗರದ ಲಯನ್ಸ್ ಸರ್ಕಲ್ ಬಳಿ ಸ್ಥಾಪಿಸಲಾಗಿದ್ದ ಶಿವಾಜಿ ಪ್ರತಿಮೆ ತೆರವು ಮಾಡಿರುವುದನ್ನು ಖಂಡಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಬಾಗಲಕೋಟೆ ನಗರದಲ್ಲಿ ಶನಿವಾರ ಬಂದ್ ನಡೆಸಿದ್ದಾರೆ.
ಆಗಸ್ಟ್ 16 ರ ರಾತ್ರಿ ಜಿಲ್ಲಾಡಳಿತ ಪ್ರತಿಮೆ ತೆರವು ಮಾಡಿತ್ತು. ಪ್ರತಿಮೆ ಸ್ಥಾಪಿಸಿರುವುದು ಕಾನೂನು ಬಾಹಿರ ಎಂದು ಜಿಲ್ಲಾಡಳಿತ ಹೇಳಿತ್ತು. ಈ ಕ್ರಮ ವಿರೋಧಿಸಿ ಸೋನಾರ್ ಲೇಔಟ್ನಲ್ಲಿ ಜಮಾಯಿಸಿದ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ಕಾರಣ ಶುಕ್ರವಾರ ಮಧ್ಯರಾತ್ರಿಯಿಂದಲೇ ನಗರದಲ್ಲಿ ಕರ್ಫ್ಯೂ ಆದೇಶ ಜಾರಿಯಾಗಿದೆ.
ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಜಿಲ್ಲಾಡಳಿತದ ಈ ಕ್ರಮವನ್ನು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣದ ಭಾಗ ಎಂದು ಹೇಳಿದೆ. ಅಲ್ಲದೆ ಶಿವಾಜಿ ಪ್ರತಿಮೆ ಪುನರ್ ಪ್ರತಿಷ್ಠಾಪನೆ ಆಗುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಘೋಷಿಸಿವೆ.
ಈ ನಡುವೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಪ್ರತಿಮೆ ಸ್ಥಾಪನೆಗೆ ಅನುಮತಿ ಇಲ್ಲದ ಕಾರಣ ಅಧಿಕಾರಿಗಳು ಶಿವಾಜಿ ಪ್ರತಿಮೆ ತೆರವಿಗೆ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ಶಿವಾಜಿ ಪ್ರತಿಮೆಯ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರದ ಅನುಮತಿಯಿಲ್ಲದೆ ಸ್ಥಾಪಿಸಲಾದ ಅನೇಕ ಪ್ರತಿಮೆಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.