ಕುಂದಗೋಳ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರಿಗೆ ಬೆಂಬಲಿಸಲು ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕುಂದಗೋಳಕ್ಕೆ ಆಗಮಿಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ.
ಹುಬ್ಬಳ್ಳಿ ಲಕ್ಷ್ಮೀಶ್ವರ ರಾಜ್ಯ ಹೆದ್ದಾರಿಯ ಜೆ.ಎಸ್.ಎಸ್. ವಿದ್ಯಾಪೀಠದಿಂದ ರೋಡ್ ಶೋ ಆರಂಭವಾಗಿದ್ದು, ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಆಗಮಿಸಿದ ಪ್ರಿಯಾಂಕ ಗಾಂಧಿ ನೇರವಾಗಿ ಹೆಲಿಪ್ಯಾಡ್ ಸುತ್ತುವರಿದಿದ್ದ ಜನರತ್ತ ಹೋಗಿ ಕೈ ಕುಲುಕಿ ಪ್ರಚಾರದ ವಾಹನ ಏರಿದರು.
ಬಳಿಕ ಆರಂಭವಾದ ರೋಡ್ ಶೋ ನಲ್ಲಿ ಸಾವಿರಾರು ಕಾಂಗ್ರೆಸ್ ಕಟ್ಟಾ ಅಭಿಮಾನಿಗಳು, ಕಾರ್ಯಕರ್ತರು ಸಕಲ ಡೊಳ್ಳು ಮೇಳ ವಾದ್ಯಗಳ ಸಾಲಿನಲ್ಲಿ ನಡೆದಿದ್ದು, ಕಾರ್ಯಕರ್ತರಲ್ಲಿ ಚುನಾವಣೆ ಉತ್ಸಾಹ ಇಮ್ಮಡಿಯಾದಂತೆ ಗೋಚರಿಸುತ್ತಿದೆ.
ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಪ್ರಿಯಾಂಕ ಗಾಂಧಿ ಆಗಮನ ನೂರಾನೆ ಬಲ ತಂದಿದ್ದು, ತೆರೆದ ವಾಹನದಲ್ಲಿ ಕಾಂಗ್ರೆಸ್ ಭವಿಷ್ಯದ ಕುಡಿ ಆಮರಶಿವ ಶಿವಳ್ಳಿ, ಮಾಜಿ ಶಾಸಕ ಎಮ್.ಎಸ್.ಅಕ್ಕಿ. ಗೌಡಪ್ಪಗೌಡ ಪಾಟೀಲ್, ಅರವಿಂದಪ್ಪ ಕಟಗಿ, ಧೃತಿ ಸಾಲ್ಮನಿ, ಅನಿಲ್ ಕುಮಾರ್ ಪಾಟೀಲ್, ಸುರೇಶ್, ಸವಣೂರು, ಅಲ್ತಾಫ್ ಕಿತ್ತೂರು ಹೀಗೆ ಅನೇಕರು ಜನರತ್ತ ಕೈ ಬೀಸಿ ಮತಯಾಚನೆ ಮಾಡಿದರು. ರೋಡ್ ಶೋ ಉದ್ದಕ್ಕೂ ಅಸಂಖ್ಯಾತ ಕಾಂಗ್ರೆಸ್ ಅಭಿಮಾನಿಗಳು ನೆಚ್ಚಿನ ನಾಯಕಿಗೆ ಹೂಮಳೆ ಸುರಿದು ಸ್ವಾಗತ ಕೋರಿದರು.