ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಬರಬೇಡಿ ಎಂದು ನಾನು ಹೇಳಿಲ್ಲ. ರಾಜ್ಯದಲ್ಲಿ ಈ ಹಿಂದೆ ಪ್ರವಾಹ ಬಂದಾಗ ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿಗೆ ಬರಲಿಲ್ಲ. ಜನರ ನೋವು ಕೇಳಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಧಿಕಾರ ಪಡೆಯಲು ಮತಕೇಳಲು ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ರೋಡ್ ಶೋ ಮಾಡುತ್ತಾರೆ. ನಾವು ಮಾಡಿದ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆಂದು ವ್ಯಂಗ್ಯವಾಡಿದರು.
ಜೂನ್ ತಿಂಗಳಿಂದಲೇ ಗ್ಯಾರಂಟಿ ಕಾರ್ಡ್ ಭರವಸೆ ಅನುಷ್ಠಾನ: ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಜೂನ್ ಇಲ್ಲವೇ ಜುಲೈ ತಿಂಗಳಲ್ಲಿ ಇದೀಗ ನಾವು ನೀಡಿರುವ ಭರವಸೆಗಳಾದ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಮನೆಯ ಯಜಮಾನಿಗೆ ತಿಂಗಳಿಗೆ 2000 ಹಣ ಹಾಗೂ ತಲಾ ಒಬ್ಬರಿಗೆ ಹತ್ತು ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದರು.