ಹುಬ್ಬಳ್ಳಿ: ಹುಬ್ಬಳ್ಳಿಯ ಜನನಿಬೀಡ ಬಡಾವಣೆಗಳ ನಡುವೆ ಇರುವ ರಕ್ಷಣಾ ಇಲಾಖೆಯ 17 ಎಕರೆ ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಲು ಹಾಗೂ ಪರ್ಯಾಯ ಜಾಗಕ್ಕೆ ಅದನ್ನು ಸ್ಥಳಾಂತರಿಸಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬೆಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮನವಿ ಮಾಡಿದ್ದಾರೆ.
ವಿಶ್ವೇಶ್ವರ ನಗರ, ಶಾಂತಿ ಕಾಲೋನಿ, ರಾಜನಗರ ಬಡಾವಣೆಗಳಲ್ಲಿ ಸಾವಿರಾರು ಕುಟುಂಬಗಳು ವಾಸಿಸುತ್ತಿದ್ದು, ಇವುಗಳ ನಡುವಿನ ಪ್ರದೇಶದಲ್ಲಿರುವ ರಕ್ಷಣಾ ಇಲಾಖೆಯ ಜಾಗಕ್ಕೆ ಕಾಂಪೌಂಡ್ ಗೋಡೆ ನಿರ್ಮಿಸಿದರೆ ಆಗುವ ಅಡಚಣೆಗಳನ್ನು ಸವಿವರವಾಗಿ ರಾಜನಾಥ್ ಸಿಂಗ್ ಅವರಿಗೆ ಜಗದೀಶ್ ಶೆಟ್ಟರ್ ಮನವರಿಕೆ ಮಾಡಿಕೊಟ್ಟಿದ್ದಾರೆ.
‘ಕಾಂಪೌಂಡ್ ಗೋಡೆ ನಿರ್ಮಾಣ ಮಾಡುವುದರಿಂದ ನೃಪತುಂಗ ಬೆಟ್ಟದಿಂದ ಹರಿದು ಬರುವ ಮಳೆ ನೀರು ನಿಲುಗಡೆಯಾಗಿ ನೂರಾರು ಮನೆಗಳು ಜಲಾವೃತವಾಗುತ್ತವೆ. ಈ ಜಾಗದ ಅಡಿ ಇರುವ ಅನೇಕ ಕುಡಿಯುವ ನೀರು ಮತ್ತು ಚರಂಡಿ ಕೊಳುವೆ ಮಾರ್ಗಗಳಿಗೆ ಧಕ್ಕೆ ಬರುವ ಅಪಾಯವಿದೆ. ಈ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಸಂಪರ್ಕ ರಸ್ತೆಯೇ ಇಲ್ಲದಂತಾಗುತ್ತದೆ. ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗೆ ತೊಂದರೆ ಉಂಟಾಗುತ್ತದೆ. ರಾಜನಗರ ಕ್ರಿಕೆಟ್ ಮೈದಾನಕ್ಕೆ ಹೋಗಿ ಬರುವ ಮಾರ್ಗವೇ ಸ್ಥಗಿತವಾಗುವ ಆತಂಕವಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
17 ಎಕರೆ ಜಾಗದಲ್ಲಿ ಶೇ.01ಕ್ಕಿಂತ ಕಡಿಮೆ ಅತಿಕ್ರಮಣವಾಗಿದೆ. ಒಂದು ವೇಳೆ ರಕ್ಷಣಾ ಇಲಾಖೆ ಈ ಜಾಗವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಥವಾ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದರೆ ಅಲ್ಲಿ ಜನಪರವಾದ ಒಂದು ಉತ್ತಮ ಯೋಜನೆಯನ್ನು ಅನುಷ್ಠಾನಗೊಳಿಸಬಹುದು. ಮಹಾನಗರ ಪಾಲಿಕೆಗೆ ಈ ವಿಷಯ ತಿಳಿಸಿ ಪರ್ಯಾಯ ಜಾಗ ಹುಡುಕಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ರಕ್ಷಣಾ ಇಲಾಖೆಗೆ ಪ್ರಸ್ತಾವನೆ ಕಳುಹಿಸಿ ಕೊಡಲಾಗುವುದು ಎಂದು ರಾಜನಾಥ್ ಸಿಂಗ್ ಅವರಿಗೆ ಕೋರಿದ್ದಾರೆ.
ಎನ್ಸಿಸಿ ಕೆಡೆಟ್ಗಳಿಗೆ ಶೂಟಿಂಗ್ ತರಬೇತಿ ನೀಡಲು 30 ವರ್ಷಗಳ ಹಿಂದೆ ಈ ಜಾಗವನ್ನು ರಕ್ಷಣಾ ಇಲಾಖೆಗೆ ನೀಡಲಾಗಿದ್ದು, ಇಲ್ಲಿಯವರೆಗೂ ರಕ್ಷಣಾ ಇಲಾಖೆ ಈ ಜಾಗದಲ್ಲಿ ತರಬೇತಿ ಆರಂಭಿಸಿಲ್ಲ. ಜನವಸತಿ ಬಡಾವಣೆಗಳ ನಡುವೆ ತರಬೇತಿ ನೀಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಇಲಾಖೆ ಸಮೀಕ್ಷೆ ನಡೆಸಿ ಜಾಗೆಯ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಮುಂದಾಗಿದೆ ಎಂದು ಇರುವ ಎಲ್ಲಾ ಸಮಸ್ಯೆಗಳನ್ನು ಅವರಿಗೆ ತಿಳಿಸಿದಾಗ ಕಾಮಗಾರಿಯನ್ನು ಸ್ಥಗಿತಗೊಳಿಸಲು ಮತ್ತು ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಲು ಸಮ್ಮತಿ ಸೂಚಿಸಿದರು ಎಂದು ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ.