ಹುಬ್ಬಳ್ಳಿ: ದೆಹಲಿಯಿಂದ ಹುಬ್ಬಳ್ಳಿಗೆ ಮಂಗಳವಾರ ರಾತ್ರಿ ವಿಶೇಷ ವಿಮಾನದಲ್ಲಿ ಬಂದಿಳಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಹಿನ್ನೆಲೆ ಬಂದ ರಾಹುಲ್ ಗಾಂಧಿಯನ್ನು ವಿಮಾನ ನಿಲ್ದಾಣದಿಂದ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿಕೊಂಡು ಹೋಟೆಲ್ಗೆ ಕರೆದುಕೊಂಡು ಬಂದಿದ್ದಾರೆ.
ಗೋಕುಲ ರಸ್ತೆಯ ಫಾರ್ಚೂನ್ ಹೋಟೆಲ್ನಲ್ಲಿ ಸಭೆ ನಡೆಯಲಿದ್ದು, ಹೋಟೆಲ್ಗೆ ಕಾಂಗ್ರೆಸ್ ನಾಯಕರು ಪ್ರವೇಶಿಸಲು ಮುಂದಾದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಆದರೆ ಪಾಸ್ ಇದ್ದವರನ್ನು ಮಾತ್ರ ಬಿಡುತ್ತಿದ್ದು, ತಮ್ಮನ್ನೂ ಒಳ ಬಿಡುವಂತೆ ಕೆಲ ನಾಯಕರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದೂ ಕಂಡುಬಂತು. ಇನ್ನು ಮುಂಚಿತವಾಗಿ ರೂಮ್ ಬುಕ್ ಮಾಡಿರುವ ಗ್ರಾಹಕರು ಕೂಡ ಈ ವೇಳೆ ಪರದಾಡುವಂತಾಗಿತ್ತು. ಹೋಟೆಲ್ನಲ್ಲಿ ತಮಗೆ ಪ್ರೆಸಿಡೆನ್ಷಿಯಲ್ ಸೂಟ್ ಬೇಡ ಎಂದು ಹೇಳಿರುವ ರಾಹುಲ್ ಗಾಂಧಿ, ಸಾಮಾನ್ಯ ರೂಮ್ ಬುಕ್ ಮಾಡುವಂತೆ ಸೂಚಿಸಿದರು.
ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ರಾಹುಲ್ ಭಾಗಿಯಾಗಲಿದ್ದಾರೆ.