ಹುಬ್ಬಳ್ಳಿ: ಹತ್ತಾರು ತಿಂಗಳುಗಳಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಗಳು. ರಸ್ತೆಯೂ ಮುಗಿಯುತ್ತಿಲ್ಲ, ಅಭಿವೃದ್ಧಿಯೂ ಆಗ್ತಿಲ್ಲ. ಈ ನಿಟ್ಟಿನಲ್ಲಿ ಹಗಲು – ರಾತ್ರಿ ಧೂಳಿನ ದರ್ಶನವಾಗಿದ್ದು, ಪರಿಸರ ಮಾಲಿನ್ಯದಿಂದ ಕಂಗೆಟ್ಟ ಜನರು ಆಕ್ರೋಶಗೊಂಡಿರುವ ಘಟನರೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕಾಮಗಾರಿ ವಿಚಾರದಲ್ಲಿ ಸ್ಮಾರ್ಟ್ ಸಿಟಿ-ಪಾಲಿಕೆ ನಡುವೆ ಕೆಸರೆರಚಾಟ ಜೋರಾಗಿದ್ದು, ಇದರಿಂದ ಸಾರ್ವಜನಿಕರಿಗೆ ಪ್ರಾಣ ಸಂಕಟ ಹೆಚ್ಚಾಗಿದೆ. ಧೂಳಿನ ಹೊಡೆತಕ್ಕೆ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ.
ವಿವಿಐಪಿಗಳು ವಾಸಿಸುವ ಪ್ರದೇಶದಲ್ಲಿಯೂ ಇದೇ ಗತಿ. ಆದರ್ಶ ನಗರ, ವಿಜಯ ನಗರ, ವಿಶ್ವೇಶ್ವರ ನಗರದಲ್ಲಿ ಎರಡು ವರ್ಷಗಳಿಂದಲೂ ಕಾಮಗಾರಿ ನಡೆದಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಐಜಿ ಸನದಿ ಸೇರಿ ಹಲವು ನಾಯಕರಿರೋ ಪ್ರದೇಶದಲ್ಲಿ ಯುಜಿಡಿ ಪೈಪ್ ಲೈನ್ ಹಾಕಿ ಹಾಗೆಯೇ ಬಿಟ್ಟಿದ್ದಾರೆ. ಭಾರೀ ವಾಹನಗಳು ಸಂಚರಿಸುತ್ತಿದ್ದಂತೆಯೇ ಎದ್ದೇಳುವ ಧೂಳು, ಮನೆ, ಅಂಗಡಿ ಮಳಿಗೆ ಇತ್ಯಾದಿಗಳ ಮೇಲೆ ಮಣ್ಣು ಬಂದು ವ್ಯವಸ್ಥೆಯೇ ಹಾಳಾಗುವಂತೆ ಮಾಡಿದೆ. ಸಾರ್ವಜನಿಕರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದು, ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ. ಧೂಳಿನಿಂದ ಮುಕ್ತಿ ನೀಡುವಂತೆ ಜನತೆಯ ಒತ್ತಾಯ ಕೇಳಿ ಬಂದಿದ್ದು,ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡೋ ಎಚ್ಚರಿಕೆ ನೀಡಿದ್ದಾರೆ.