ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಶಾಸಕ ಅಮೃತ ದೇಸಾಯಿ ವೇದಿಕೆ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಬಹಿರಂಗ ಸವಾಲಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ಕೊಡುತ್ತಿದ್ದಾರೆ.
ಬಾರೋ ಅಂತ ಕರೆದವರು ಈಗ ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಾಮಾಜಿಕ ಜಾಲತಾಣದ ವಾರ್ ಬಗ್ಗೆ ಧಾರವಾಡದಲ್ಲಿ ಮಾತನಾಡಿರುವ ಶಾಸಕ ಅಮೃತ ದೇಸಾಯಿ, ಈಗಲೂ ಅವರಿಗೆ ಬಾರೋ ಅಂತಲೇ ಕರೆಯುತ್ತೇನೆ. ಅವರು ಬಂದಾದ್ರೂ ಬರಲಿ, ಕಾಂಗ್ರೆಸ್ನವರು ಧಾರವಾಡ ಗ್ರಾಮೀಣ ಕ್ಷೇತ್ರವನ್ನು ಗೆಲ್ಲುವ ತಿರುಕನ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯನವರು ಬಂದು ಇಲ್ಲಿ ಚುನಾವಣೆಗೆ ನಿಂತರೂ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ಅದಕ್ಕೆ ನಮ್ಮ ತಂಡ ಸಿದ್ಧವಿದೆ. ಬಿಜೆಪಿ 5 ವರ್ಷಗಳ ಕಾಲ ನೆಮ್ಮದಿ ಜೀವನ ಮಾಡಲು ಮಾಡಿಕೊಟ್ಟಿದೆ. ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಜನರು ನೋಡಿದ್ದಾರೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ನವರೂ ಪೋಸ್ಟ್ ಹಾಕುತ್ತಿರುತ್ತಾರೆ ಅದಕ್ಕೆ ನಮ್ಮವರೂ ಪ್ರತ್ಯುತ್ತರ ಕೊಡುತ್ತಿರುತ್ತಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನಾವು ಮತ್ತೊಮ್ಮೆ ಕಮಲವನ್ನು ಅರಳಿಸಿಯೇ ತೀರುತ್ತೇವೆ ಎಂದರು.