ಬೆಳ್ತಂಗಡಿ: ಬೆಳ್ತಂಗಡಿ ಪರಿಸರ ಸುತ್ತಮುತ್ತ ಆಲಿಕಲ್ಲುಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನ ಇದೀಗ ಮಳೆರಾಯನ ಆಗಮನದಿಂದ ಕೊಂಚ ನಿರಾಳರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ, ಮುಂಡಾಜೆ, ಧರ್ಮಸ್ಥಳ, ಕೊಕ್ಕಡ, ನಾರಾವಿ, ಬೆಳ್ತಂಗಡಿ, ಚಾರ್ಮಾಡಿ, ಸವಣಾಲು, ಕಡಿರುದ್ಯಾವರ ಸಹಿತ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ ಎಂದು ತಿಳಿದು ಬಂದಿದೆ. ಬಹುತೇಕ ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿರುವುದರ ಬಗ್ಗೆ ವರದಿಯಾಗಿದೆ.
ನಿನ್ನೆ ರಾತ್ರಿಯಿಂದಲೇ ಮಳೆ ಮುನ್ಸೂಚನೆ ನೀಡಿದ್ದು, ಗುಡುಗು ಸಹಿತ ಹನಿ ಮಳೆಯಾಗಿತ್ತು.ಇನ್ನು ಸುಳ್ಯ ತಾಲೂಕಿನಲ್ಲಿಯೂ ಹನಿಮಳೆಯಾದ ಬಗ್ಗೆ ವರದಿಯಾಗಿದೆ. ಬಿಸಿಲ ತಾಪಮಾನದಿಂದ ಕೃಷಿ ತೋಟಗಳಿಗೆ ನೀರಿಲ್ಲದೇ ರೈತರು ಕಂಗಾಲಾಗಿದ್ದರು. ಇದೀಗ ಮಳೆಯಿಂದಾಗಿ ವಾತಾವರಣ ತಂಪೇರಿದೆ. ಮಳೆ ಪರಿಣಾಮ ಕೆಲವೆಡೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ ಎಂದು ತಿಳಿದು ಬಂದಿದೆ.
ಗುರುವಾರ ಮಧ್ಯರಾತ್ರಿಯೇ ಮಳೆ ಮುನ್ಸೂಚನೆ ನೀಡಿದ್ದು ಗುಡುಗು ಸಹಿತ ಹನಿ ಮಳೆಯಾಗಿತ್ತು. ಇದೀಗ ಶುಕ್ರವಾರ ಗಾಳಿಯೊಂದಿಗೆ ಮಳೆ ಆರಂಭಗೊಂಡು ರಸ್ತೆ, ಚರಂಡಿಗಳಲ್ಲಿ ನೀರು ಹರಿಯುವ ಮಟ್ಟಿಗೆ ಮಳೆಯಾಗಿದೆ. ಬೇಸಗೆ ಬಿಸಿಯಿಂದ ಅಂತರ್ಜಲ ಬರಿದಾಗಿ ಕೊಳವೆಬಾವಿಯಲ್ಲಿ ನೀರಿಲ್ಲದೆ ಕೃಷಿಕರು ಕಂಗೆಟ್ಟಿದ್ದರು. ಇದೀಗ ಅರ್ಧ ತಾಸು ಮಳೆಯಿಂದಾಗಿ ವಾತಾವರಣ ತಂಪೇರಿದೆ. ಬಹುತೇಕ ಕಡೆ ಆಲಿಕಲ್ಲು ಮಳೆಯಾಗಿದೆ.
ಸಿಡಿಲಿಗೆ ಹಲವರ ಮನೆಗಳ ವಿದ್ಯುತ್ ಉಪಕರಣಗಳಿಗು ಹಾನಿಯಾಗಿದೆ. ಮಳೆ ಆರಂಭ ಆಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ವಿದ್ಯುತ್ ಕಂಬ ಮುರಿತ
ಮಳೆಯೊಂದಿಗೆ ಬೀಸಿದ ಗಾಳಿಗೆ ಉಜಿರೆ ಹಾಗೂ ಮುಂಡಾಜೆ ಯಲ್ಲಿ 25ಕ್ಕಿಂತ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.ಅಲ್ಲದೆ ವಿದ್ಯುತ್ ಲೈನ್ ಮೇಲೆ ಮರದ ಗೆಲ್ಲುಗಳು ಮುರಿದು ಬಿದ್ದಿದ್ದು ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಿದೆ.
ಕಡಿರುದ್ಯಾವರ ಗ್ರಾಮದ ಗಜಂತೋಡಿ ಸಮೀಪ ಬಿಜು ತೋಮಸ್ ಎಂಬವರ ಸುಮಾರು ಒಂದು ಸಾವಿರದಷ್ಟು ನೇಂದ್ರ ಬಾಳೆಗಿಡಗಳು ಶುಕ್ರವಾರ ಸಂಜೆ ಮಳೆಯ ಜತೆ ಬೀಸಿದ ಭಾರಿ ಗಾಳಿಗೆ ಧರಾಶಾಯಿಯಾಗಿವೆ.