ಬೆಳಗಾವಿ: ಮಗ ಪ್ರೀತಿಸಿದ ಯುವತಿಯ ಓಡಿ ಹೋಗಿದ್ದಕ್ಕೆ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ವಂಟಮೂರಿ ಗ್ರಾಮದ ನಿವಾಸಿ ದುಂಡಪ್ಪ ಅಶೋಕ ನಾಯಕ್ ಟ್ರಕ್ ಡೈವರ್ ಆಗಿದ್ದಾನೆ. ಈತನ ತಾಯಿ ಕಮಲವ್ವ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಕಮಲವ್ವ ಮಗ ದುಂಡಪ್ಪ ಪ್ರಿಯಾಂಕಾ ಬಸಪ್ಪ ನಾಯಕ್ ಎಂಬಾಕೆಯನ್ನು ಪ್ರೀತಿಸಿದ್ದ, ಕಳೆದ ಎರಡು ವರ್ಷದಿಂದ ಒಬ್ಬರಿಗೊಬ್ಬರು ಪ್ರಿತಿ ಮಾಡುತ್ತಿದ್ದರು. ಇಂದು ಪ್ರಿಯಾಂಕಾ ಕುಟುಂಬಸ್ಥರು ಯಾದಿ ಮೇ ಶಾದಿ (ನಿಶ್ಚಿತಾರ್ಥ) ಮಾಡಲು ನಿರ್ಧರಿಸಿದ್ದರು.
ಈ ವಿಚಾರ ತಿಳಿದ ಪ್ರೇಮಿಗಳು ಓಡಿ ಹೋಗಲು ನಿರ್ಧರಿಸಿದ್ದರು. ಮಧ್ಯರಾತ್ರಿ ಪ್ರಿಯಾಂಕಾ ಕರೆದುಕೊಂಡು ದುಂಡಪ್ಪ ಓಡಿ ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಮನೆಯವರು ದುಂಡಪ್ಪನ ಮನೆಗೆ ಬಂದು, ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿ ತಾಯಿಯ ಮೇಲೆ ಮೃಗೀಯ ವರ್ತನೆ ತೋರಿರುವುದು ಮಾತ್ರವಲ್ಲ ಮನೆಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿ ಹೋಗಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.