ಬೆಳಗಾವಿ: ಸಿಬಿಐ ದಾಳಿಯಾದ ನಾಲ್ಕೇ ದಿನಕ್ಕೆ ರಕ್ಷಣಾ ಇಲಾಖೆಯ ಅಡಿಯಲ್ಲಿ ಸಿಇಒ ಆಗಿ ಕೆಲಸ ಮಾಡ್ತಿದ್ದ ಅಧಿಕಾರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಯಾಂಪ್ ಪ್ರದೇಶದಲ್ಲಿರುವ ತಮ್ಮದೇ ಸರ್ಕಾರಿ ನಿವಾಸದಲ್ಲಿ ಆನಂದ್ ಶವವಾಗಿ ಪತ್ತೆಯಾಗಿದ್ದರು.
ರಕ್ಷಣಾ ಇಲಾಖೆಗೆ ಒಳಪಡುವ ಬೆಳಗಾವಿಯ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ಆನಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕ್ಯಾಂಪ್ ಠಾಣೆ ಪೊಲೀಸರಿಗೆ ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೊಟಕ್ಕೆ ಕಂಡು ಬಂದಿತ್ತು. ಇನ್ನೂ ಮರಾಠಾ ಲಘ ಪದಾತಿ ದಳದ ಬ್ರಿಗೇಡಿಯರ್ ಸೇರಿದಂತೆ ಸೇನೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಭೇಟಿ ನೀಡಿ ರಕ್ಷಣಾ ಇಲಾಖೆ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಜೊತೆಗೆ ತಮಿಳುನಾಡಿನಲ್ಲಿರುವ ಆನಂದ್ ಅವರ ತಂದೆ ತಾಯಿಗೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡು ದಿನಗಳಿಂದ ರೂಮ್ ನಿಂದ ಹೊರ ಬರದ ಆನಂದ್ ಅವರು ನಿನ್ನೆ ಇಡೀ ದಿನ ಊಟ ಸೇರಿದಂತೆ ಏನನ್ನೂ ಸ್ವೀಕರಿಸಿರಲಿಲ್ಲ. ಆದರೆ ನಿನ್ನೆ ಇಡೀ ದಿನ ಕಾದು ಇಂದು ಬೆಳಗ್ಗೆ ಮತ್ತೆ ರೂಮ್ ನ ಬಾಗಿಲು ಬಡೆದಿದ್ದಾರೆ. ಈ ವೇಳೆ ಬಾಗಿಲು ತೆಗೆಯದಿದ್ದಾಗ ಸ್ಥಳೀಯ ಪೊಲೀಸರಿಗೆ ಹಾಗೂ ಎಮ್ಎಲ್ಆರ್ಸಿ ಸೇನೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ.
ನಿವಾಸಕ್ಕೆ ಬಂದು ಒಳಗಿನಿಂದ ಬಾಗಿಲು ಲಾಕ್ ಆಗಿದ್ದನ್ನ ಗಮನಿಸಿದ ಪೊಲೀಸರು ಸಿಬ್ಬಂದಿ ಸಹಾಯ ಪಡೆದು ಡೋರ್ ಲಾಕ್ ಮುರಿದು ಒಳ ಹೋಗಿ ನೋಡಿದ್ದಾರೆ. ಈ ವೇಳೆ ಬೆಡ್ ಕೆಳಗೆ ಆನಂದ್ ಶವವಾಗಿ ಪತ್ತೆಯಾಗಿದ್ದಾರೆ. ಇಡೀ ರೂಮ್ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಹಾಸಿಗೆಯಲ್ಲಿ ವಿಷದ ಬಾಟಲ್ ಸಿಕ್ಕಿದ್ರೇ, ಇತ್ತ ಡೆತ್ ನೋಟ್ ಸಿಕ್ಕಿದೆ. ಹೊರಗಿನಿಂದ ಯಾರಾದ್ರೂ ಬಂದಿರಬಹುದಾ ಅನ್ನೋದನ್ನ ಕೂಡ ಪರಿಶೀಲನೆ ಮಾಡಿ ನಂತರ ಶವವನ್ನ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.