ಬೆಂಗಳೂರು: ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕೋಣಗಳ ಓಟದ ಸ್ಪರ್ಧೆ ಕಂಬಳ ರಾಜಧಾನಿಯಲ್ಲಿ ನಡೆಯುತ್ತಿದೆ. ಜೊತೆಗೆ ಸಾಂಸ್ಕೃತಿಕ ವೈಭವದ ಆಯೋಜನೆ ಹಾಗೂ ರುಚಿಕರ ಅಡುಗೆ ಸಿದ್ಧವಾಗುತ್ತಿದೆ.
ಬೆಂಗಳೂರು ಕಂಬಳಕ್ಕೆ ಆಗಮಿಸಿರುವ ಅತಿಥಿಗಳಿಗೆ, ಸ್ವಯಂ ಸೇವಕರಿಗೆ, ಪರಿಚಾರಕರಿಗೆ, ಕೋಣಗಳ ಯಜಮಾನರಿಗೆ ಸೇರಿ ಸಾವಿರಾರು ಮಂದಿಗೆ ದಿನಕ್ಕೆ ಮೂರು ಬಾರಿ ಎಂಬಂತೆ ಮೂರೂ ದಿನವೂ ವಿಶೇಷ ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ಸಿದ್ಧವಾಗುತ್ತಿದೆ.
ಬೆಂಗಳೂರಿನ ಸೋನಾ ಕೇಟರಿಂಗ್ ನ ಮಾಲೀಕ ಸೋನಾ ಗಣೇಶ್ ನಾಯಕ್ ಅವರ 150 ಸಿಬ್ಬಂದಿಗಳ ತಂಡವು ಭೋಜನ ತಯಾರು ಮಾಡುತ್ತಿದೆ.
ಬೆಳಗಿನ ಉಪಹಾರಕ್ಕೆ: ಮೂಡೆ ಸಾಂಬಾರ್, ಬನ್ಸ್, ದೋಸೆ, ಬಿಸ್ಕುಟ್ ಅಂಬಡೆ, ಪಲಾವ್ ಸೇರಿ ಹಲವು ಬಗೆಗಳ ತಿಂಡಿ ಮಾಡಲಾಗಿದೆ.
ಮಧ್ಯಾಹ್ನ ಊಟಕ್ಕೆ: ಕುಚ್ಚಲಕ್ಕಿ ಅನ್ನ, ಗಂಜಿ, ಚಿಕನ್ ಪುಳಿಮುಂಚಿ, ಕಬಾಬ್, ಮೀನು ಊಟ ಎಂದು ಕರಾವಳಿ ಶೈಲಿಯ ಭೋಜನ ತಯಾರಾಗುತ್ತಿದ್ದು, ಭೋಜನ ಪ್ರಿಯರ ಹೊಟ್ಟೆ ತಣಿಸಲಿದೆ.
ಒಂದು ಹೊತ್ತಿನ ಊಟಕ್ಕೆ ಐದು ಸಾವಿರ ಮೂಡೆ, ಹತ್ತು ಸಾವಿರ ಬಿಸ್ಕುಟ್ ಅಂಬಡೆ, 500 ಕೆಜಿ ಪಲಾವ್ ಮಾಡಲಾಗಿದ್ದರೆ, 1000 ಕೆಜಿ ಚಿಕನ್, 5000 ಬಂಗುಡೆ ಮೀನು, ಒಂದು ಟನ್ ಕುಚ್ಚಲಕ್ಕಿ ಬಳಸಲಾಗುತ್ತಿದೆ.
ವಿಶೇಷ ಏನೆಂದರೆ ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಇಟಲಿಯಲ್ಲಿ ನಡೆದ ಮದುವೆಯಲ್ಲಿ ವಿಶೇಷ ಅಡುಗೆ ತಯಾರು ಮಾಡಿದ್ದು ಇದೆ ಬಾಣಸಿಗರ ತಂಡ.