ಬೆಂಗಳೂರು: ಅಂತಾರಾಜ್ಯ ಅಡಿಕೆ ವ್ಯಾಪಾರಿಯ 1 ಕೋಟಿ ರೂ. ಹಣ ಕಳವು ಪ್ರಕರಣ ಆರೋಪಿಗಳ ಜಾಡು ಪತ್ತೆ ಹಚ್ಚಿದ ಉಪ್ಪಾರಪೇಟೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಾರು ಚಾಲಕ ಸಂತೋಷ್ ಸೇರಿ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಅಂತಾರಾಜ್ಯ ಅಡಿಕೆ ವ್ಯಾಪಾರಿ ಹೆಚ್.ಎಸ್. ಉಮೇಶ್ ಅ.7 ರಂದು ಚಿತ್ರದುರ್ಗದಿಂದ ವಿವಿಧ ಜಿಲ್ಲೆಗಳ ಅಡಿಕೆ ಖರೀದಿಗೆ ಕಾರಿನಲ್ಲಿ 1 ಕೋಟಿ ರೂ. ಹಣ ತಂದಿದ್ದರು. ಊಟಕ್ಕೆಂದು ಗಾಂಧೀನಗರದ ಹೋಟೆಲ್ ಮುಂಭಾಗ ಕಾರು ನಿಲ್ಲಿಸಿದ್ದರು. ನಂತರ ಚಂದ್ರಾಲೇಔಟ್, ದಾಬಸ್ ಪೇಟೆ ಬಳಿಯೂ ಕಾರು ನಿಲ್ಲಿಸಿದ್ದರು. ಸಂಜೆ 7:45 ರ ವೇಳೆಗೆ ಚಿತ್ರದುರ್ಗದ ಭೀಮಸಮುದ್ರದ ಅಂಗಡಿಗೆ ತೆರಳಿ ಕಾರಿನ ಡಿಕ್ಕಿ ಪರಿಶೀಲಿಸಿದಾಗ ಕಳವು ಬೆಳಕಿಗೆ ಬಂದಿತ್ತು.
ಘಟನೆ ಕುರಿತು ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಶಿರಾ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧೀನಗರಕ್ಕೆ ಬಂದಿದ್ದ ವೇಳೆ ಕಳವಾಗಿರಬಹುದು ಎಂದು ಶಂಕಿಸಲಾಗಿತ್ತು. ಅಡಿಕೆ ವ್ಯಾಪಾರಿ ಉಮೇಶ್ ದೂರಿನ ಹಿನ್ನಲೆ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ಉಪ್ಪಾರಪೇಟೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.