ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾಖಲೆಗಳಿಲ್ಲದೆ ಹಣವನ್ನು ಸಾಗಿಸುತ್ತಾರೆ ಎಂಬ ಉದ್ದೇಶದಿಂದ ಪೊಲೀಸರು ಪ್ರತಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಇದುವರೆಗೆ ಅಕ್ರಮವಾಗಿ ವಾಹನಗಳಲ್ಲಿ ಸಾಗಿಸುತ್ತಿದ್ದ 7 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಯಲ್ಲಿ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಶನಿವಾರ ಬೆಳ್ಳಂಬೆಳಗ್ಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅತಿ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ. ವಿವಿಧ ಚೆಕ್ ಪೋಸ್ಟ್ಗಳಲ್ಲಿ ಒಟ್ಟು 7 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರ ಚೆಕ್ ಪೋಸ್ಟ್ನಲ್ಲಿ 6 ಲಕ್ಷ ರೂ. ಮತ್ತು ಹುಲ್ಯಾಳ ಚೆಕ್ ಪೋಸ್ಟನಲ್ಲಿ 1 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾಹಿತಿ ನೀಡಿದರು.
ಅಬಕಾರಿ ಇಲಾಖೆಯಿಂದ ದಾಳಿ ನಡೆಸಿ 77.70 ಲೀಟರ್ ಮದ್ಯ ಮತ್ತು 15.60 ಲೀಟರ್ ಬಿಯರ್ ವಶಕ್ಕೆ ಪಡೆಯಲಾಗಿದೆ. ಒಟ್ಟು 5.50 ಲಕ್ಷ ರೂ. ಮೌಲ್ಯದ ಮದ್ಯ ಮತ್ತು ಬಿಯರ್ ಸೀಜ್ ಆಗಿದ್ದು, ನಗರದ ಬಸವೇಶ್ವರ ವೃತ್ತದ ಬಳಿ ಆಟೋದಲ್ಲಿ ಸಾಗಿಸುತ್ತಿದ್ದ 2.89 ರೂ. ಮೌಲ್ಯದ 34.56 ಲೀಟರ್ ಮದ್ಯ, ಜಮಖಂಡಿ ಮತಕ್ಷೇತ್ರದ ಕುಂಚನೂರು ಗ್ರಾಮದ ಹತ್ತಿರ 8.64 ಲೀಟರ್ ಮದ್ಯ, ಬಾದಾಮಿ ಮತಕ್ಷೇತ್ರದ ಜಾಲಿಹಾಳ ಗ್ರಾಮದ ರಮಜಾನಸಾಬ್ ಹುಸೇನಸಾಬ ಮನೆ ಮೇಲೆ ದಾಳಿ ಮಾಡಿ 15.6 ಲೀಟರ್ ಬೀಯರ್ ಹಾಗೂ ಹುನಗುಂದ ಮತಕ್ಷೇತ್ರದ ಹೂವನೂರ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ 71 ಸಾವಿರ ಮೌಲ್ಯದ 4.320 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಮುಧೋಳ ಅಬಕಾರಿ ಪೊಲೀಸರು ದಾಳಿ ನಡೆಸಿ 354 ಲೀ ಸಾಮರ್ಥ್ಯದ 40 ಬಾಕ್ಸ್ ಮದ್ಯ ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಗ್ರಾಮವೊಂದರ ಅರುಣ ಕಲ್ಲೊಳ್ಳಿ ಎಂಬುವರ ಮನೆಯಲ್ಲಿ ಸಂಗ್ರಹಿಸಿದ್ದ 1.5 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿ ಅರುಣ್ನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.