ಬಾಗಲಕೋಟೆ: ಮುಧೋಳ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭ ಮಾಡುವ ವಿಷಯದಲ್ಲಿ ಸಚಿವ ಗೋವಿಂದ ಕಾರಜೋಳ ಸೇಡಿನ ರಾಜಕಾರಣ ಮಾಡಬಾರದು. ಸಮಸ್ಯೆ ಪರಿಹರಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಮುಧೋಳದ ಕಾಂಗ್ರೆಸ್ ಪಕ್ಷದ ಮುಖಂಡ ಸತೀಶ ಬಂಡಿವಡ್ಡರ ಆಗ್ರಹಿಸಿದರು.
ಕಾರ್ಖಾನೆ ಬಂದ್ ಮಾಡಿದ್ದರಿಂದ ಕಾರ್ಮಿಕರು, ರೈತರು ಬೀದಿಗೆ ಬಿದ್ದಿದ್ದಾರೆ. ಅವರ ಬಗ್ಗೆ ಕಾಳಜಿ ವಹಿಸಬೇಕಿರುವುದು ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ. 20 ವರ್ಷಗಳ ಹಿಂದೆ ಕಾರ್ಖಾನೆ ಅಧ್ಯಕ್ಷ ಸ್ಥಾನ ರಾಜೀನಾಮೆ ಪಡೆದುಕೊಂಡಿರುವ ವಿಷಯ ಮುಂದಿಟ್ಟುಕೊOಡು ಸೇಡಿನ ರಾಜಕಾರಣ ಮಾಡಲು ಮುಂದಾಗುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರನ್ನ ಕಾರ್ಖಾನೆ ಆರಂಭದಿOದಲು ಲಾಸ್ನಲ್ಲಿ ಇದೆ. ಗೋವಿಂದ ಕಾರಜೋಳ ಅವರು 30 ತಿಂಗಳುಗಳ ಕಾಲ ಕಾರ್ಖಾನೆ ಅಧ್ಯಕ್ಷರಾಗಿದ್ದ ವೇಳೆ 16 ಕೋಟಿ ಸಾಲ ಇತ್ತು. ನಂತರ ಇದು ದೊಡ್ಡ ಮೊತ್ತ ದತ್ತ ಸಾಗಿತು. ಕಾರ್ಖಾನೆ ಲಾಭದಲ್ಲಿದೆ ಎನ್ನುವ ಘೋಷಣೆ ಈವರೆಗೆ ಮೊಳಗಲಿಲ್ಲ. ಕಾರ್ಖಾನೆಯ ಕೆಟ್ಟ ಸ್ಥಿತಿಗೆ ಬರಲು ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ನೇತೃತ್ವದ ಆಡಳಿತ ಮಂಡಳಿ ನೇರ ಕಾರಣ, ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಪ್ರಸಕ್ತ ವರ್ಷದಿಂದ ಕಾರ್ಖಾನೆ ಆರಂಭಿಸಿ ರೈತರು, ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ರಾಜೀವ ಕಂಠಿ, ಬಸವರಾಜ ಇಟ್ಟನವನರ, ಲೋಕಣ್ಣ ನಾವಿ, ಕಿರಣ ನ್ಯಾಮಗೌಡ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.