ಬಾಗಲಕೋಟೆ: ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ, ಕಾರ್ಖಾನೆ ಬಂದ್ ಆಗಿರುವ ಕಾರಣಗಳ ಬಗ್ಗೆ ತನಿಖೆ ನಡೆಸುವ ಕುರಿತು ಸಚಿವ ಗೋವಿಂದ ಕಾರಜೋಳ ತುಟಿಕ್,ಪಿಟಿಕ್ ಎನ್ನುತ್ತಿಲ್ಲ. ಅವರಿಗೆ ಯಾವ ಭಯ ಕಾಡುತ್ತಿದೆ? ಸಾರ್ವಜನಿಕ ಹಿತಾಸಕ್ತಿಗ್ಗಿಂತ ತಮ್ಮ ರಾಜಕೀಯ ಹಿತಾಸಕ್ತಿ ಮುಖ್ಯನಾ? ಎಂದು ಕರವೇ ಜಿಲ್ಲಾಧ್ಯಕ್ಷ ರಮೇಶ ಪ್ರಶ್ನೆ ಮಾಡಿದರು.
ರನ್ನ ಕಾರ್ಖಾನೆ ಮೇಲೆ 570 ಕಾರ್ಮಿಕರು, 20 ಸಾವಿರ ರೈತರ ಭವಿಷ್ಯ ಅಡಗಿದೆ. ಕಾರ್ಖಾನೆ ಅಧೋಗತಿಗೆ ತಲುಪಲು ಕಾರಣ ಬಹಿರಂಗ ಸತ್ಯ. ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ನೇತೃತ್ವದ ಆಡಳಿತ ಮಂಡಳಿ ಸೂಪರ್ ಸೀಡ್ಗೊಳಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಈ ಬಗ್ಗೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕಾದ ಸಚಿವ ಗೋವಿಂದ ಕಾರಜೋಳ ಹಿಂದೇಟು ಹಾಕುತ್ತಿರುವುದು ತರವಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಹಣ ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗಿಲ್ಲ. ಡಿಸಿಸಿ ಬ್ಯಾಂಕ್ ಸಾಲ ದುರ್ಬಳಕೆ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗಳಿಗೆ ತನಿಖೆ ನಡೆಸಲು ಯಾವ ಒತ್ತಡ ಅಡ್ಡಿಪಡಿಸುತ್ತಿದೆ. 18 ವರ್ಷಗಳಿಂದ ಸಚಿವ ಗೋವಿಂದ ಕಾರಜೋಳ ಚಾಲಕನಿಗೆ 40 ಲಕ್ಷ ರೂ. ವರೆಗೆ ವೇತನ ಕಾರ್ಖಾನೆಯಿಂದ ಜಮೆಯಾಗಿದೆ. ಹೋರಾಟಗಾರರ ಮೇಲೆ ದಬ್ಬಾಳಿಕೆ ನಡೆಸುವುದು ಎಷ್ಟು ಸರಿ? ಕಾರ್ಖಾನೆ ವಿಷಯದಲ್ಲಿ ತಮ್ಮ ಪಾತ್ರವಿಲ್ಲ ಎಂದಾದಲ್ಲಿ ತನಿಖೆ ಮಾಡಿ ಎಂದು ಸಚಿವ ಗೋವಿಂದ ಕಾರಜೋಳಗೆ ಸವಾಲ್ ಹಾಕಿದರು.
ಮಹಾತ್ಮ ಗಾಂಧಿಜಿ, ಲಾಲ್ ಬಹದ್ಧೂರ ಶಾಸ್ತ್ರೀ, ದೇವರಾಜ ಅರಸು ಅವರು ತ್ಯಾಗ, ಬಲಿದಾನದಿಂದ ಶ್ರೇಷ್ಠ ನಾಯಕರಾಗಿ ಗುರುತಿಸಿಕೊಂಡವರು. ನೀವು ಮುಧೋಳ ಕ್ಷೇತ್ರಕ್ಕೆ, ಬಾಗಲಕೋಟೆ ಜಿಲ್ಲೆಗೆ ಯಾವ ತ್ಯಾಗ ಮಾಡಿದ್ದೀರಿ ಹೇಳಿ?. ಇದೀಗ ರನ್ನ ಕಾರ್ಖಾನೆ ಖಾಸಗೀಕರಣಗೊಳಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬದ್ಧತೆ ಇಲ್ಲದ ಹೇಳಿಕೆಗಳು ತಮಗೆ ಶೋಭೆ ತರುವುದು ಎಂದು ಸಚಿವ ಗೋವಿಂದ ಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡರು.
ಶೀಘ್ರದಲ್ಲಿ ಪ್ರಗತಿಪರ ಸಂಘಟನೆಗಳು, ರೈತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳೊAದಿಗೆ ಸಭೆ ನಡೆಸಿ ಮುಂದಿನ ಹೋರಾಟ ರೂಪಿಸಲಾಗುವುದು. ಕಾರ್ಖಾನೆ ಅವ್ಯವಹಾರ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಕಾರ್ಖಾನೆ ಖಾಸಗೀಕರಣಕ್ಕೆ ಅವಕಾಶ ನೀಡಬಾರದು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಬಸವರಾಜ ಧರ್ಮಂತಿ, ಡೋಂಗ್ರಿಸಾಬ ನದಾಫ್ , ಮಲ್ಲು ಕಟ್ಟಿಮನಿ, ಬಸವರಾಜ ಅಂಬಿಗೇರ, ಆತ್ಮರಾಮ ನೀಲನಾಯಕ, ವಿನೀತ ಮೇಲಿನಮನಿ ಇದ್ದರು.